
ಶಿರಸಿ: 2025–26ನೇ ಸಾಲಿನ 15ನೇ ಹಣಕಾಸಿನ ಕ್ರಿಯಾಯೋಜನೆ ಅನುಮೋದನೆಗೊಂಡಿದ್ದರೂ ಗ್ರಾಮ ಪಂಚಾಯಿತಿಗಳಿಗೆ ಈವರೆಗೆ ಕೆಲಸ ಮಾಡಲು ಅನುಮತಿ ಸಿಕ್ಕಿಲ್ಲ. ಹೀಗಾಗಿ ಅಧಿಕಾರದ ಕೊನೆಯ ಹೊಸ್ತಿನಲ್ಲಿರುವ ಪಂಚಾಯಿತಿ ಪ್ರತಿನಿಧಿಗಳು ಒತ್ತಡಕ್ಕೆ ಸಿಲುಕುವಂತಾಗಿದೆ.
‘ತಾಲ್ಲೂಕಿನ 10ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ನಮ್ಮ ಗ್ರಾಮ ನಮ್ಮ ಯೋಜನೆಯ ವಾರ್ಷಿಕ ಕಾರ್ಯಕ್ರಮಗಳನ್ನು ಅಪ್ಲೋಡ್ ಮಾಡುವುದನ್ನು ಬಾಕಿ ಇಟ್ಟುಕೊಂಡಿವೆ. ಇದರ ಜತೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಇ-ಸ್ವರಾಜ್ ಪೋರ್ಟಲ್ನಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡುವುದರಲ್ಲಿ ವಿಳಂಬತನ ತೋರಿದ್ದಾರೆ. ಹೀಗೆ ಪಂಚಾಯಿತಿ ಅಭಿವೃದ್ಧಿ ಯೋಜನೆಗಳು, ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸದೇ ಇರುವುದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರು ತಿಂಗಳು ಕಳೆದರೂ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಸ್ವಂತ ವರಮಾನ ವಿಲ್ಲದ ಗ್ರಾಮ ಪಂಚಾಯಿತಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ’ ಎಂಬುದು ಪಂಚಾಯಿತಿ ಪ್ರತಿನಿಧಿಗಳ ದೂರಾಗಿದೆ.
‘15ನೇ ಹಣಕಾಸು ಆಯೋಗದ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಶೇಕಡಾ 85ರಷ್ಟು ನೀಡಲಾಗುತ್ತದೆ. ಈ ಅನುದಾನವನ್ನು ಶಾಲಾ-ಅಂಗನವಾಡಿ ಶೌಚಾಲಯಗಳು, ಕುಡಿಯುವ ನೀರಿನ ಪೂರೈಕೆ ಮತ್ತು ನೈರ್ಮಲೀಕರಣದಂತಹ ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸಬೇಕು. ಅನಿರ್ಭಂಧಿತ ಅನುದಾನವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಅವಕಾಶವಿದೆ. ಈಗಾಗಲೇ ಸಿದ್ಧಪಡಿಸಿರುವ ಕ್ರಿಯಾಯೋಜನೆಗೆ ಅನುಮೋದನೆ ಸಿಕ್ಕು ಬಹಳ ತಿಂಗಳಾಗಿವೆ. ಆದರೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವವರೆಗೆ ಕೆಲಸದ ಆದೇಶ ಮಂಜೂರಿ ಮಾಡಲು ಆಗುವುದಿಲ್ಲ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ಹೇಳುತ್ತಾರೆ. ಇದರಿಂದ ಪಂಚಾಯಿತಿಗಳು ಇಕ್ಕಟ್ಟಿನಲ್ಲಿ ಸಿಲುಕುವಂತಾಗಿದೆ’ ಎಂಬುದು ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ನವೀನ ಶೆಟ್ಟಿ ಮಾತು.
‘ಪ್ರತಿ ವರ್ಷವೂ ಜೂನ್ ತಿಂಗಳಲ್ಲೇ ಹಣಕಾಸು ಆಯೋಗದ ಅನುದಾನದಲ್ಲಿ ಮೊದಲ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಲಾಗುತ್ತಿತ್ತು. ಈ ಬಾರಿ ಪಂಚಾಯತ್ ರಾಜ್ ಇಲಾಖೆಯು ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಇ-ಸ್ವರಾಜ್ ಪೋರ್ಟಲ್ನಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡುವುದರಲ್ಲಿ ವಿಳಂಬ ಮಾಡಿದೆ. ಇದರಿಂದ ಕೇಂದ್ರವು ಅನುದಾನವನ್ನು ತಡೆ ಹಿಡಿದ ಬಗ್ಗೆ ಮಾಹಿತಿ ದೊರಕಿದೆ’ ಎಂದು ಅವರು ಹೇಳಿದರು. ಜತೆಗೆ ‘ಈಗಾಗಲೇ ಅನುಮೋದನೆಗೊಂಡ ಕಾಮಗಾರಿಗಳನ್ನು ನಡೆಸಲು ಆದೇಶ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಕಾರ್ಯಾಲಯಕ್ಕೆ ತೆರಳಿ ಒಕ್ಕೂಟದ ಮೂಲಕ ಒತ್ತಾಯಿಸಲಾಗುವುದು’ ಎಂದೂ ತಿಳಿಸಿದರು.
ಈವರೆಗಿನ ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದು ಮುಂದಿನ ಒಂದೆರಡು ತಿಂಗಳಲ್ಲಿ 15ನೇ ಹಣಕಾಸಿನ ಅನುದಾನ ಬಿಡುಗಡೆಯಾಗುವಂತೆ ಕ್ರಮ ಕೈಗೊಳ್ಳುತ್ತೇವೆಚನ್ನಬಸಪ್ಪ ಹಾವಣಗಿ ತಾಲ್ಲೂಕು ಪಂಚಾಯಿತಿ ಇಒ
‘ಅಭಿವೃದ್ದಿ ಯೋಜನೆಗೆ ಅನುಮೋದನೆ ವಿಳಂಬ’
‘ಸದಸ್ಯರೆಲ್ಲರೂ ಸೇರಿ ಗ್ರಾಮದ ಪ್ರಮುಖ ಅಭಿವೃದ್ಧಿ ಯೋಜನೆಯ ಪಟ್ಟಿಗಳನ್ನು ಸಿದ್ಧಪಡಿಸಿ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೆ ಕಳುಹಿಸಲಾಗುತ್ತಿತ್ತು. ಅಧಿಕಾರ ಆಡಳಿತಾಧಿಕಾರಿ ಕೈನಲ್ಲಿ ಇರುವುದರಿಂದ ಶಾಲೆ ಆರೋಗ್ಯ ರಸ್ತೆ ಕುಡಿಯುವ ನೀರು ಕೃಷಿ ಸಹಾಯ ಬಡಜನರ ಕಲ್ಯಾಣ ಕಾರ್ಯಕ್ರಮಗಳಲ್ಲಿ ನಿರ್ಣಯ ಕೈಗೊಳ್ಳುವ ಜನಪ್ರತಿನಿಧಿ ವೇದಿಕೆ ಇಲ್ಲದ ಕಾರಣ ಕಾರ್ಯಗತ ನಿಧಾನವಾಗಿದೆ. ಪಂಚಾಯಿತಿಗಳಲ್ಲಿ ತೀರ್ಮಾನ ಕೈಗೊಂಡ ಕೆಲಸಗಳಿಗೆ ಮೇಲ್ಮಟ್ಟದಲ್ಲಿ ಅನುಮೋದನೆ ಸಿಗುವುದು ತೀರಾ ವಿಳಂಬವಾಗುತ್ತಿದೆ’ ಎನ್ನುತ್ತಾರೆ ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ನವೀನ ಶೆಟ್ಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.