ಮುಂಡಗೋಡ: ಲಾಕ್ಡೌನ್ನಿಂದ ರಾಜ್ಯದ ವಿವಿಧೆಡೆ ಸಿಲುಕಿಕೊಂಡಿದ್ದ ಹೊರರಾಜ್ಯದ ಕಾರ್ಮಿಕರನ್ನು, ಅವರ ಊರುಗಳಿಗೆ ವಿಮಾನದಲ್ಲಿ ತಲುಪಿಸಲು ಹೈಕೋರ್ಟ್ನ ಕೆಲವು ವಕೀಲರು ಮುಂದಾಗಿದ್ದಾರೆ.
ಬೆಂಗಳೂರಿನ ಹೈಕೋರ್ಟ್ ವಕೀಲ ಶ್ರೇಯಸ್ ಜಯಸಿಂಹ, ಧಾರವಾಡ ಹೈಕೋರ್ಟ್ ವಕೀಲರಾದ ಹರ್ಷ ದೇಸಾಯಿ, ಕೆ.ಎಸ್.ಪಾಟೀಲ ಸೇರಿದಂತೆ ಸಮಾನಮನಸ್ಕ ವಕೀಲರು ಸ್ವಂತ ಖರ್ಚಿನಲ್ಲಿ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುತ್ತಿದ್ದಾರೆ.
'ತಾಲ್ಲೂಕಿನ ಟಿಬೆಟನ್ ಕ್ಯಾಂಪ್ನಲ್ಲಿ ನೆಲೆಸಿದ್ದ ಛತ್ತಿಸಗಡದ ಒಟ್ಟು ಐವರು ಕಾರ್ಮಿಕರನ್ನು ಬುಧವಾರ ಖಾಸಗಿ ವಾಹನದ ಮೂಲಕ ಬೆಂಗಳೂರಿಗೆ ಕಳಿಸಲಾಯಿತು. ಅಲ್ಲಿಂದ ವಿಮಾನದ ಮೂಲಕ ತಮ್ಮ ಊರಿಗೆ ತೆರಳಲಿದ್ದಾರೆ. ಇನ್ನೂ 44 ಜನರು ಇಲ್ಲಿಯೇ ಇದ್ದು, ಅವರನ್ನು ಸಹ ಮುಂದಿನ ದಿನಗಳಲ್ಲಿ ವಿಮಾನದ ಮೂಲಕ ಕಳಿಸುವ ವ್ಯವಸ್ಥೆ ಮಾಡಲಾಗುತ್ತದೆ' ಎಂದು ಇಲ್ಲಿನ ಹಿರಿಯ ವಕೀಲ ಗುಡ್ಡಪ್ಪ ಕಾತೂರ ಹೇಳಿದರು.
'ರಾಜ್ಯದ ವಿವಿಧೆಡೆ ನೆಲೆಸಿರುವ ಕಾರ್ಮಿಕರನ್ನು ವಿಮಾನದ ಮೂಲಕ ಊರಿಗೆ ಕಳಿಸುವ ಕೆಲಸವನ್ನು ಸಮಾನಮನಸ್ಕ ವಕೀಲರು ಮಾಡುತ್ತಿದ್ದಾರೆ. ಅವರ ಸಾಮಾಜಿಕ ಕಳಕಳಿಗೆ ಸ್ಪಂದಿಸಿ, ಈ ತಾಲ್ಲೂಕಿನಲ್ಲಿ ಇದ್ದ ಕೆಲ ಕಾರ್ಮಿಕರನ್ನು ಕಳಿಸಿಕೊಡಲಾಗಿದೆ' ಎಂದರು.
ವಕೀಲ ವಿಶ್ವನಾಥ ಪವಾಡಶೆಟ್ಟರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.