ಶಿರಸಿ: ಮಲೆನಾಡಿನಲ್ಲಿ ಈ ಬಾರಿ ಚಳಿಗಾಲ ತಡವಾಗಿ ಆರಂಭವಾಗಿದೆ. ಕಳೆದ ಎರಡು ದಿನಗಳಿಂದ ಮೈಕೊರೆವ ಚಳಿ ಅನುಭವಕ್ಕೆ ಬರುತ್ತಿದೆ.
ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮಂಗಳವಾರ ಬೆಳಿಗ್ಗೆ 9 ಗಂಟೆಯವರೆಗೂ ದಟ್ಟವಾದ ಮಂಜು ಆವರಿಸಿದ ವಾತಾವರಣವಿತ್ತು. ನೂರು ಮೀಟರ್ ಆಚೆ ನಿಂತಿರುವ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗದಷ್ಟು ಮಂಜು ಆವರಿಸಿತ್ತು. ನಿತ್ಯ ವಾಕಿಂಗ್ ಹೋಗುವವರು ಮಂಗಳವಾರ ಬೆಳಗಿನ ಮಂಜನ್ನು ಕಂಡು ಅಚ್ಚರಿಪಟ್ಟರು. 8.30 ಗಂಟೆಯಾದರೂ ಸೂರ್ಯ ಮೋಡದ ಮರೆಯಲ್ಲೇ ಇದ್ದ. ಶಾಲೆಗೆ ಹೋಗುವ ಮಕ್ಕಳು ಇಬ್ಬನಿಯ ಮಜ ಅನುಭವಿಸಿದರು.
’ಈ ವರ್ಷ ಡಿಸೆಂಬರ್ ಕಳೆದರೂ ಚಳಿಯ ಅನುಭವ ಇರಲಿಲ್ಲ. ಉಣ್ಣೆ ಬಟ್ಟೆ ಧರಿಸಿ, ವಾಕಿಂಗ್ ಬರುವ ಸಂದರ್ಭವೇ ಬಂದಿರಲಿಲ್ಲ. ಆದರೆ, ಎರಡು ದಿನಗಳಿಂದ ನಿಧಾನವಾಗಿ ಚಳಿಯ ಪ್ರಮಾಣ ಹೆಚ್ಚುತ್ತಿದೆ’ ಎಂದು ವಾಕಿಂಗ್ ಹೊರಟಿದ್ದ ಸುಮತಿ ಹೇಳಿದರು.
ನಗರದಲ್ಲಿ ಹೀಗಾದರೆ, ಗ್ರಾಮೀಣ ಪ್ರದೇಶದ ಜನರಿಗೆ ಈ ವರ್ಷದ ಮೊದಲ ಚಳಿ ಅನುಭವಕ್ಕೆ ಬಂತು. ಡೇರಿಗೆ ಹಾಲು ಕೊಡಲು ಹೋಗುವವರು, ತೋಟಕ್ಕೆ ಹೋಗುವವರು ಮೈಗಪ್ಪಳಿಸುವ ತಣ್ಣನೆ ಗಾಳಿಗೆ ಮುದುಡಿದರು. ‘ಬೆಳಿಗ್ಗೆ ಹಾಲು ಕರೆಯಲು ಹೋಗುವಾಗ ಕೈಯಲ್ಲಿ ನೀರಿನ ಚೊಂಬು ಹಿಡಿದರೆ, ಐಸ್ ಹಿಡಿದಂತೆ ಆಗುತ್ತಿತ್ತು. ಮುದುಕರು ಬೆಂಕಿ ಕಾಯಿಸಿದ ಮೇಲೆ ಕೊಂಚ ನಿರಾಳರಾದರೂ, ಬಿಸಿಲು ಬಂದ ಮೇಲೆ ನಿಟ್ಟುಸಿರು ಬಿಟ್ಟರು’ ಎಂದರು ತಾರಗೋಡಿನ ಸುರೇಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.