ಹೊನ್ನಾವರ: ಪಾವಿನಕುರ್ವ ಸಮೀಪದ ಸಮುದ್ರ ತೀರದಲ್ಲಿ ಕಡಲಾಮೆಗಳ ಸಾವಿಗೆ ಕಾರಣ ತಿಳಿಯಲು ಸಹಾಯಕ ಅರಣ್ಯಾಧಿಕಾರಿ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಯಿತು.
ಕಡಲಾಮೆ ಮೊಟ್ಟೆಗಳ ಸಂರಕ್ಷಣೆಗೆಂದು ಸಮುದ್ರ ತೀರದಲ್ಲಿ ಇಡಲಾಗಿದ್ದ ಪಂಜರದ ಸಮೀಪ ಆಮೆ ಮರಿಗಳು ಸತ್ತಿದ್ದರ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಈ ತನಿಖೆ ನಡೆಸಲಾಯಿತು.
‘ಆಮೆಯ ಹೆಜ್ಜೆ ಗುರುತು ಕಂಡು ಬಂದ ಜಾಗದ ಸಮೀಪದಲ್ಲಿ ಮೊಟ್ಟೆ ಇಟ್ಟಿರಬಹುದೆಂದು ಊಹಿಸಿ ರಕ್ಷಣೆಗಾಗಿ ಪಂಜರ ನಿರ್ಮಿಸಲಾಗಿತ್ತು. ಸ್ವಾಭಾವಿಕ ವಿಧಾನದಲ್ಲಿ ನಡೆಯುವ ಪ್ರಕ್ರಿಯೆಯಿಂದ ಮೊಟ್ಟೆಗಳಿಂದ ಪ್ರತಿಶತ ಎಷ್ಟು ಮರಿಗಳು ಹೊರಬರುತ್ತವೆ ಎಂಬುದನ್ನು ತಿಳಿಯಲು ಪ್ರಾಯೋಗಿಕವಾಗಿ ಪಂಜರ ನಿರ್ಮಿಸಲಾಗಿತ್ತು. ಸಾಮಾನ್ಯವಾಗಿ 45ರಿಂದ 55 ದಿನಗಳಲ್ಲಿ ಮೊಟ್ಟೆಗಳಿಂದ ಮರಿ ಹೊರಬರುತ್ತವೆ. ಆದರೆ, 60 ದಿನಗಳು ಕಳೆದರೂ ಈ ಜಾಗದಲ್ಲಿ ಮರಿಗಳು ಕಂಡು ಬಂದಿರಲಿಲ್ಲ’ ಎಂದು ತನಿಖೆ ನಡೆಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಬೋರಯ್ಯ ತಿಳಿಸಿದರು.
‘ಶುಕ್ರವಾರ ಸುಮಾರು 140 ಮರಿಗಳು ಹೊರ ಬಂದಿರುವ ಕುರುಹು ಸಿಕ್ಕಿದ್ದು, ಇವುಗಳಲ್ಲಿ ಹೆಚ್ಚಿನ ಮರಿಗಳು ಕಡಲನ್ನು ಸೇರಿಕೊಂಡಿವೆ. ಪಂಜರಕ್ಕೆ ಹಾಕಲಾಗಿದ್ದ ಬಲೆಗೆ ಸಿಲುಕಿ ಕೆಲವು ಮರಿಗಳು ಸತ್ತಿರುವುದಾಗಿ ಶಂಕಿಸಲಾಗಿದೆ. ಹಳದೀಪುರ ಕಡಲ ತೀರದಲ್ಲಿ ಈ ರೀತಿ ಆಮೆ ಮೊಟ್ಟೆಗಳ ರಕ್ಷಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.
‘ಕೆಲವು ವರ್ಷಗಳಿಂದ ಸಂರಕ್ಷಿತ ಮೊಟ್ಟೆಗಳಿಂದ ಸಾವಿರಾರು ಮರಿಗಳು ಹೊರಬಂದು ಕಡಲನ್ನು ಸೇರಿವೆ. ಶನಿವಾರ ಮೊಟ್ಟೆಯಿಂದ ಹೊರಬಂದ 96 ಆಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಗಿದೆ. ಆಮೆ ಸಂರಕ್ಷಣೆಯ ವಿಷಯದಲ್ಲಿ ಅವಘಡಗಳಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.