ಹೊನ್ನಾವರ: ಚಿರತೆ ಉಗುರುಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ನಾಲ್ವರು ಆರೋಪಿಗಳನ್ನು ಇಲ್ಲಿಯ ಅರಣ್ಯ ಇಲಾಖೆಯ ಸಿಬ್ಬಂದಿಯ ತಂಡ ಬುಧವಾರ ಬಂಧಿಸಿದೆ.
ತಾಲ್ಲೂಕಿನ ಮುಗ್ವಾ ಕ್ರಾಸ್, ಮುಗ್ವಾ ಗ್ರಾಮ ಹಾಗೂ ಅರೇಅಂಗಡಿಯಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಮುಗ್ವಾದ ಅಂತೋನಿ ಮಿನಿನ್ ಫರ್ನಾಂಡಿಸ್ (48), ಬೀರನಗೋಡ ಬೆಳ್ಳಿಮಕ್ಕಿಯ ರೋಶನ್ ವಿನ್ಸೆಂಟ್ ಲೋಬೋ (45), ಸಾಲಕೋಡಿನ ಮಹೇಶ ರಾಮ ನಾಯ್ಕ (36) ಹಾಗೂ ಹೊಸಗೋಡಿನ ಗಣಪತಿ ನಾರಾಯಣ ಗೌಡ (29) ಬಂಧಿತರು.
ಬಂಧಿತರಿಂದ ಚಿರತೆಯ ಒಂಬತ್ತು ಜೊತೆ ಉಗುರು ಹಾಗೂ ಒಂದು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಚಿರತೆ ಉಗುರನ್ನು ಕುತ್ತಿಗೆಗೆ ಹಾಕುವ ಸರದ ಲಾಕೆಟ್ ಮಾಡಲು ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
‘ಆರೋಪಿಗಳು ಚಿರತೆಗಳನ್ನು ಕೊಂದು ಉಗುರನ್ನು ಸಂಗ್ರಹಿಸಿದ್ದಾರೊ ಅಥವಾ ಬೇರೆಯವರಿಂದ ಖರೀದಿಸುತ್ತಿದ್ದ ಮಧ್ಯವರ್ತಿಗಳಾಗಿ ವ್ಯವಹರಿಸುತ್ತಿದ್ದರೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮಾರಾಟ ಜಾಲದಲ್ಲಿ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿರುವ ಶಂಕೆಯಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿ.ಸಿ.ಎಫ್ ಗಣಪತಿ.ಕೆ ಹಾಗೂ ಎ.ಸಿ.ಎಫ್ ಕೆ.ಟಿ.ಬೋರಯ್ಯ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಕೋಟ್ಯಾಳ, ರಾಜು ನಾಯ್ಕ, ತುಕಾರಾಮ, ಸುಬ್ರಹ್ಮಣ್ಯ ಗೌಡ, ಈಶ್ವರ ಗೌಡ, ಅರಣ್ಯ ರಕ್ಷಕರಾದ ಅಲ್ಲಾಮರ್ತುಜ ಬಾವಿಕಟ್ಟಿ, ಚಂದ್ರಪ್ಪ ಹಾಗೂ ಯಲ್ಲಪ್ಪ ತಂಡದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.