ಅಂಕೋಲಾ: ತಾಲ್ಲೂಕಿನ ಸಿಂಗನಮಕ್ಕಿಯಲ್ಲಿ ಅರಣ್ಯ ಇಲಾಖೆಯ ಗೇರು ತೋಟದಲ್ಲಿ ಸೋಮವಾರ ಕಾಣಿಸಿಕೊಂಡ ನಾಲ್ಕು ಹೆಬ್ಬಾವುಗಳನ್ನು ಉರಗ ತಜ್ಞ ಮಹೇಶ ನಾಯ್ಕ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಸಹಾಯದಿಂದ ಕಾಡಿಗೆ ಬಿಟ್ಟರು.
ಸಿಂಗನಮಕ್ಕಿಯ ತೋಟದ ಗುತ್ತಿಗೆ ಪಡೆದ ಸಿಬ್ಬಂದಿ ಗೇರು ಹಣ್ಣು ಕೀಳಲು ಹೋದಾಗ ಎರಡು ಹೆಬ್ಬಾವುಗಳು ಇರುವುದನ್ನು ಗಮನಿಸಿದರು. ಅರಣ್ಯ ಇಲಾಖೆಗೆ ತಿಳಿಸಿ ಅವರ ಮೂಲಕ ಮಹೇಶ ನಾಯ್ಕ ಅವರನ್ನು ಕರೆದುಕೊಂಡು ಬರಲಾಯಿತು. ನಂತರ ಅಲ್ಲಿಯೇ ಇನ್ನೆರಡು ಹೆಬ್ಬಾವುಗಳು ಇರುವುದು ಕಂಡುಬಂತು. ಅವುಗಳನ್ನು ನೋಡಿ ಸಾರ್ವಜನಿಕರು ಆತಂಕಗೊಂಡರು.
ಮಂಗಳೂರಿನ ಪರಿಣಿತ ಉರಗ ತಜ್ಞ ಗುರುರಾಜ ಹೊಸಮನಿ ಅವರನ್ನು ಸಂಪರ್ಕಿಸಿದಾಗ, ಸಾಮಾನ್ಯವಾಗಿ ಫೆಬ್ರುವರಿ ತಿಂಗಳಲ್ಲಿ ಹಾವುಗಳ ಮಿಲನ ಸಮಯವಾದ್ದರಿಂದ ಗಂಡು ಹಾವು ಮತ್ತು ಹೆಣ್ಣು ಹಾವು ಸೇರುತ್ತವೆ. ಏಕಕಾಲದಲ್ಲಿ 4ರಿಂದ 6 ಹಾವುಗಳ ಕಂಡುಬರುತ್ತವೆ ಎಂದು ಸ್ಪಷ್ಟನೆ ನೀಡಿದರು. ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಹೆಬ್ಬಾವುಗಳು ಒಟ್ಟಿಗೆ ಕಾಣಿಸಿಕೊಂಡಿವೆ ಎಂದು ಮಹೇಶ ನಾಯ್ಕ ತಿಳಿಸಿದರು.
ಮಹೇಶ ನಾಯ್ಕ, ತಾಲ್ಲೂಕಿನ ಬಾಳೆಗುಳಿಯ ಹರ್ಶದ್ ಖಾನ್ ಅವರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು ಮತ್ತು ಕಾರವಾರದ ಅರ್ಗಾದ ರಾಮದಾಸ ಗುನಗಾ ಅವರ ಮನೆಯಲ್ಲಿ ಕಾಣಿಸಿಕೊಂಡ ಒಂದು ಹಾವು ಸೇರಿದಂತೆ ಆರು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.