ಶಿರಸಿ: ಶನಿವಾರ ಇಲ್ಲಿ ನಡೆದ ಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಬ್ಯಾಂಡ್ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಗದಗದ ಲಕ್ಷ್ಮೀಶ್ವರ ಚಂದನ ಶಾಲೆ ತಂಡ ಪ್ರಥಮ, ಮಂಡ್ಯದ ಪಾಂಡವಪುರ ಶಾಲೆ ತಂಡ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಧಾರವಾಡದ ಪ್ರಸೆಂಟೇಷನ್ ಶಾಲೆಯ ತಂಡ ಪ್ರಥಮ, ಬೆಂಗಳೂರು ಉತ್ತರದ ವಿವೇಕ ಬಾಲ ಮಂದಿರ ತಂಡ ದ್ವಿತೀಯ ಸ್ಥಾನ ಪಡೆದವು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಉಪನಿರ್ದೇಶಕರ ಕಚೇರಿಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಧಾರವಾಡ, ಗದಗ, ಚಿಕ್ಕೋಡಿ, ಮಂಡ್ಯ, ಉಡುಪಿ, ಚಾಮರಾಜನಗರ, ಶಿರಸಿಯ ಆವೆಮರಿಯಾ ಬ್ಯಾಂಡ್ ತಂಡಗಳು ಭಾಗವಹಿಸಿದ್ದವು. ಸುಂದರ ಸಮವಸ್ತ್ರ ಧರಿಸಿದ್ದ ಮಕ್ಕಳು, ಆಕರ್ಷಕವಾಗಿ ಬ್ಯಾಂಡ್ ನುಡಿಸಿ, ಗಮನ ಸೆಳೆದರು. ಶಿಕ್ಷಣ ಇಲಾಖೆಯ ಅಧಿಕಾರಿ ವೆಂಕಟೇಶ ಪಟಗಾರ ಸ್ಪರ್ಧೆಗೆ ಚಾಲನೆ ನೀಡಿ, ‘ಈ ಸ್ಪರ್ಧೆ ಇತ್ತೀಚೆಗೆ ಆರಂಭಗೊಂಡಿದ್ದರೂ, ಹೆಚ್ಚು ಪ್ರಸಿದ್ಧಿಗೆ ಬರುತ್ತಿದೆ. ವಿದ್ಯಾರ್ಥಿಗಳುಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗೂ ಮಹತ್ವ ನೀಡಬೇಕು’ ಎಂದರು.
ಶಿಕ್ಷಣ ಇಲಾಖೆ ಅಧಿಕಾರಿಗಳಾದ ಸಿ.ಎಸ್.ನಾಯ್ಕ, ಎಂ.ಎಸ್.ಹೆಗಡೆ, ಸದಾನಂದ ಸ್ವಾಮಿ, ಪ್ರಮುಖರಾದ ಸಿ.ಎಸ್.ಭಟ್ಟ, ಎಚ್.ಪಿ.ನದಾಫ್, ರವೀಂದ್ರ ತಾಪ್ಸಿ, ನಾರಾಯಣ ನಾಯ್ಕ, ದೀಪಾ ಪಟಗಾರ, ಎಚ್.ಐ.ಶೇಖ್, ಎಸ್.ಎಸ್.ಮಾದರ ಇದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ವಸಂತ ಭಂಡಾರಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅಶೋಕ ಭಜಂತ್ರಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.