ಭಟ್ಕಳ: ಇಲ್ಲಿನ ಸರ್ಪನಕಟ್ಟೆ ಮುಖ್ಯ ಪೇಟೆಯ ಬಳಿಯಲ್ಲಿ ಶುಕ್ರವಾರ ಮುಂಜಾನೆ 7 ಗಂಟೆ ಸುಮಾರಿಗೆ ಗ್ಯಾಸ್ ಟ್ಯಾಂಕರ್ ಮತ್ತು ಪ್ಯಾಸೆಂಜರ್ ಟೆಂಪೋ ಅಪಘಾತವಾಗಿದ್ದು, ಟೆಂಪೋ ಚಾಲಕನ ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ.
ಗಂಭೀರ ಗಾಯಗೊಂಡ ಟೆಂಪೋ ಚಾಲಕ ನರಸಿಂಹ ಮಾದೇವ ನಾಯ್ಕನನ್ನು( 39)ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇವರು ಬೆಳ್ಕೆ ಮದ್ಗಾರಕೇರಿ ನಿವಾಸಿ ಎಂದು ತಿಳಿದು ಬಂದಿದೆ.
ಮಂಗಳೂರಿನಿಂದ ಧಾರವಾಡದ ಕಡೆಗೆ ವೇಗವಾಗಿ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್, ಭಟ್ಕಳದಿಂದ ಗೊರಟೆ ಕಡೆಗೆಹೋಗುತ್ತಿದ್ದ ಪ್ಯಾಸೆಂಜರ್ ಟೆಂಪೋಗೆ ಗುದ್ದಿದೆ. ಈ ರಭಸಕ್ಕೆ ಗ್ಯಾಸ್ ಟ್ಯಾಂಕರ್ ಮುಂಭಾಗದ ಎರಡು ಚಕ್ರಗಳು ಕಳಚಿ ಬಿದ್ದಿವೆ.
ಅಪಘಾತದಲ್ಲಿ ಟ್ಯಾಂಕ್ ಚಾಲಕ ತಮಿಳ ಅರಸನ್ (29) ಹಾಗೂ ಕ್ಲೀನರ ರಾಜೀವ(32) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತ ತಪ್ಪಿಸಲು ಹೋಗಿ ಟೆಂಪೋ ಹೆದ್ದಾರಿ ಪಕ್ಕದಲ್ಲಿದ್ದ ಶ್ರೀಲಕ್ಷ್ಮಿ ಟ್ರೇಡರ್ಸ್ ಅಂಗಡಿಯ ಒಳಗೆ ನುಗ್ಗಿದೆ.
ರಸ್ತೆಯ ಪಕ್ಕದಲ್ಲಿ ಬಿದ್ದ ಗ್ಯಾಸ್ ಟ್ಯಾಂಕರ್ ಅನ್ನು ಎತ್ತಲುಮಂಗಳೂರಿನಿಂದ ಭಾರತ ಗ್ಯಾಸ್ ಕಂಪನಿತಂಡ ಬರುತ್ತಿದ್ದು, ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದಅಗ್ನಿ ಶಾಮಕ ದಳ ಸಿಬ್ಬಂದಿ ಗ್ಯಾಸ್ ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪಿಎಸೈ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.