ಗೋಕರ್ಣ: ಶೃಂಗೇರಿ ಶಾರದಾ ಪೀಠಾಧೀಶ್ವರ ಶಂಕರಾಚಾರ್ಯ ವಿಧುಶೇಖರಭಾರತೀ ಸ್ವಾಮೀಜಿ ಭಾನುವಾರ, ಗೋಕರ್ಣದಲ್ಲಿ ಪುನರ್ ನಿರ್ಮಾಣಗೊಂಡ ಗಾಯತ್ರಿ ತೀರ್ಥ, ಗಾಯತ್ರಿ ಶಿಲಾಮಯ ಮಂದಿರದಲ್ಲಿ, ಗಾಯತ್ರಿ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಮಂದಿರದ ಶಿಖರ ಪ್ರತಿಷ್ಠಾಪನೆ ನೆರವೇರಿಸಿದರು.
ಶಿಲಾಮಯ ಗಾಯತ್ರಿ ಮೂರ್ತಿಯನ್ನು ಪ್ರತಿಷ್ಠಾಪನೆಗೊಳಿಸಿದ ಸ್ವಾಮೀಜಿ, ನಂತರ 2 ಗಂಟೆ ಷೋಡಶೋಪಚಾರ ಪೂಜೆ ಗೈದರು. ಶಿಲಾಮಯ ಮಂದಿರದ ಮೇಲೆ ಶಿಖರ ಪ್ರತಿಷ್ಠಾಪನೆಯನ್ನೂ ನೆರವೇರಿಸಿ, ಗಾಯತ್ರಿ ತೀರ್ಥಕ್ಕೆ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಶ್ರೀಗಳನ್ನು ಮಹಾಗಣಪತಿ ದೇವಸ್ಥಾನದಿಂದ ಗಾಯತ್ರಿ ತೀರ್ಥದವರೆಗೆ ವೇದಘೋಷ, ಪಂಚವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ನೂರಾರು ವೈದಿಕರು ಈ ಸಂದರ್ಭಕ್ಕೆ ಸಾಕ್ಷಿಯಾದರು.
ಅಗ್ನಿಹೋತ್ರಿ ಬಾಲಚಂದ್ರ ದೀಕ್ಷಿತ್, ನಾರಾಯಣ ಭೂಷಣ ಉಪಾಧ್ಯಾಯ, ಚಂದ್ರಶೇಖರ ಅಡಿ ಮೂಳೆ, ಪರಮೇಶ್ವರ ಪ್ರಸಾದ ರಮಣಿ, ನಾಗರಾಜ ಉಪಾಧ್ಯಾಯ, ಗಣಪತಿ ಭೂಷಣ ಉಪಾಧ್ಯಾಯ, ಗಣಪತಿ ಗಜಾನನ ಹಿರೇ ಮುಂತಾದ ವೈದಿಕರ ಸಹಾಯದಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ನಾಲ್ಕೂ ವೇದದ ಪಾರಾಯಣ ನಡೆಸಲಾಯಿತು.
ದಿ. ಆಚಾರ್ಯ ಶ್ರೀಧರ ಅಡಿಯವರ ಇಚ್ಛೆಯಂತೆ ನಿರ್ಮಾಣವಾದ ಶಿಲಾಮಯ ಮಂದಿರದಲ್ಲಿ, ಶಿಲಾಮಯ ಗಾಯತ್ರಿ ಮೂರ್ತಿಯ ಪ್ರತಿಷ್ಠಾಪನೆ ಶೃಂಗೇರಿ ಜಗದ್ಗುರುಗಳಿಂದಲೇ ನೆರವೇರಿಸಲಾಯಿತು. ಸ್ಥಳೀಯ ಯಂಗ್ ಸ್ಟಾರ್ ಕ್ಲಬ್ ಸಂಪೂರ್ಣ ನಾಶವಾಗಿದ್ದ ಗಾಯತ್ರಿ ತೀರ್ಥವನ್ನು ಪುನರ್ ನಿರ್ಮಿಸಿದ ಕಾರ್ಯಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಶನಿವಾರ ಸಂಜೆ ಗೋಕರ್ಣಕ್ಕೆ ಆಗಮಿಸಿದ ಶಂಕರಾಚಾರ್ಯ ವಿಧುಶೇಖರಭಾರತೀ ಸ್ವಾಮೀಜಿ ಅವರನ್ನು ಸಂಪ್ರದಾಯದಂತೆ ವೇದಘೋಷ, ಪೂರ್ಣ ಕುಂಭ ಸ್ವಾಗತ, ಮತ್ತು ಪಂಚವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಇಲ್ಲಿಯ ಮಹಾಗಣಪತಿ, ಮಹಾಬಲೇಶ್ವರ ಮತ್ತು ಪಾರ್ವತಿ ದೇವಸ್ಥಾನಕ್ಕೆ ಭೇಟಿಯಿತ್ತ ಶ್ರೀಗಳು, ಧೋಳಿ ಪೂಜೆ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.