ದಾಂಡೇಲಿಯ ಅಂಬೇವಾಡಿಯ ಪ್ರಥಮ ದರ್ಜೆ ಪದವಿ ಕಾಲೇಜಿನ ವಿವಿಧ ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸಿ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿದರು
ದಾಂಡೇಲಿ: ‘ವಿದ್ಯಾರ್ಥಿಗಳು ತಮ್ಮ ದೈನಂದಿನ ಬದುಕಿನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಮಹತ್ವ ನೀಡಬೇಕು. ಶಿಕ್ಷಣದಿಂದ ಉದ್ಯೋಗ ಪಡೆದರೆ ಆರೋಗ್ಯ ಜೀವನೋತ್ಸಾಹದ ಬದುಕನ್ನು ನೀಡುತ್ತದೆ’ ಎಂದು ಕರ್ನಾಟಕ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.
ಅಂಬೇವಾಡಿಯ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಧಾನಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಮಂಜೂರಾದ ₹5 ಕೋಟಿ ಸಾಂಸ್ಥಿಕ ಅಭಿವೃದ್ಧಿ ಯೋಜನೆಯನ್ನು ಉದ್ಘಾಟಿಸಿ ಹಾಗೂ ಗ್ರಂಥಾಲಯ, ಬಿ.ಸಿ.ಎ ಕಟ್ಟಡ ಹಾಗೂ ವ್ಯಾಯಾಮ ಶಾಲೆಗಳ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
‘ಭಾರತದ ಹತ್ತು ಸಾವಿರಕ್ಕೂ ಹೆಚ್ಚು ಕಾಲೇಜುಗಳು ಕೇಂದ್ರ ಸರ್ಕಾರಕ್ಕೆ ₹5 ಕೋಟಿ ಸಾಂಸ್ಥಿಕ ಅಭಿವೃದ್ಧಿ ಯೋಜನೆಯನ್ನು ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದು, ಕೇವಲ ದೇಶದಾದ್ಯಂತ 300 ಕಾಲೇಜುಗಳು ಆಯ್ಕೆಯಾಗಿವೆ. ಕರ್ನಾಟಕದಿಂದ ಕೇವಲ 20 ಕಾಲೇಜುಗಳು ಆಯ್ಕೆಯಾಗಿದ್ದು, ಈ ಕಾಲೇಜು ಕೂಡ ಒಂದಾಗಿರುವುದು ಹೆಮ್ಮೆಯ ವಿಷಯ. ಇಲ್ಲಿಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದ ಸಾಮೂಹಿಕ ಪ್ರಯತ್ನದಿಂದ ಈ ಮಾನ್ಯತೆ ದಕ್ಕಿದ್ದು ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ ಎಂದರು.
ಹೊಸ ಕಟ್ಟಡ ಕಾಮಗಾರಿಗಳ ನಿರ್ಮಾಣ, ನವೀಕರಣ ಮತ್ತು ಉನ್ನತೀಕರಣ, ಉಪಕರಣಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ₹5 ಕೋಟಿ ಅನುದಾನದ ಹಂಚಿಕೆ ವಿವರಗಳನ್ನು ಸಭೆಗೆ ನೀಡಿದರು.
ನಗರಸಭೆ ಅಧ್ಯಕ್ಷ ಅಶ್ಫಾಕ್ ಶೇಖ್, ತಹಶೀಲ್ದಾರ್ ಶೈಲೇಶ ಪರಮಾನಂದ, ದಾಂಡೇಲಿ ನಗರಸಭೆ ಪೌರಾಯುಕ್ತ ವಿವೇಕ ಬನ್ನೆ, ತಾಲ್ಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಸಿ. ಹಾದಿಮನಿ, ನಗರಸಭೆ ಸದಸ್ಯರಾದ ಮೋಹನ ಹಲವಾಯಿ, ಸಂಜಯ ನಂದ್ಯಾಳಕರ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಯಾಸ್ಮಿನ ಕಿತ್ತೂರ, ಬಶೀರ ಗಿರಿಯಾಲ, ಇಕ್ವಾಲ ಶೇಖ್, ರಫೀಕ ಖಾನ, ಸರಸ್ವತಿ ರಜಪೂತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.