ADVERTISEMENT

ಗೊಂದಳಿ ಸಮುದಾಯಕ್ಕೆ ಜಮೀನು ನೀಡಲು ಆಗ್ರಹ

15 ದಿನಗಳಲ್ಲಿ ಇತ್ಯರ್ಥವಾಗದಿದ್ದರೆ ಪ್ರತಿಭಟನೆಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 20:00 IST
Last Updated 4 ಡಿಸೆಂಬರ್ 2019, 20:00 IST
ಸಂಜಯ ಮಾರುತಿ ಕದಮ್
ಸಂಜಯ ಮಾರುತಿ ಕದಮ್   

ಕಾರವಾರ: ‘ಜಿಲ್ಲೆಯಲ್ಲಿ ಗೊಂದಳಿ ಸಮುದಾಯಕ್ಕೆ ಮನೆ ಮಂಜೂರು ಮಾಡುವುದು, ಸ್ಮಶಾನ ಭೂಮಿ ನಿಗದಿ ಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು 15 ದಿನಗಳಲ್ಲಿ ಈಡೇರಿಸಬೇಕು. ಇಲ್ಲದಿದ್ದರೆ ಜನವರಿ ತಿಂಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಗೊಂದಳಿ ಸಮಾಜ ಕ್ರಾಂತಿ ಮೋರ್ಚಾದ ಮುಖಂಡ ಸಂಜಯ ಮಾರುತಿ ಕದಮ್ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ನಮ್ಮ ಸಮುದಾಯದ 50 ಸಾವಿರಕ್ಕಿಂತ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ಆದರೆ, ಯಾರಿಗೂ ಸ್ವಂತ ಮನೆಗಳಿಲ್ಲ. ಸೂಕ್ತ ಉದ್ಯೋಗವಿಲ್ಲ. ಹಾಗಾಗಿ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಪ್ರವರ್ಗ 1ರಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಇತರ ಹಿಂದುಳಿದ ಜಾತಿ (ಒ.ಬಿ.ಸಿ) ಎಂದು ಗುರುತಿಸಲಾಗಿದೆ. ಆದರೆ, ಇದರಿಂದ ಸಮಾಜಕ್ಕೆಯಾವುದೇ ಲಾಭವಾಗುತ್ತಿಲ್ಲ’ ಎಂದು ಅವರು ದೂರಿದರು.

ಬೇಡಿಕೆಗಳು: ಅಯೋಧ್ಯೆಯ ರಾಮಜನ್ಮಭೂಮಿ ಟ್ರಸ್ಟ್‌ ಆಡಳಿತ ಮಂಡಳಿಯಲ್ಲಿ ಗೊಂದಳಿ, ಜೋಶಿ ಜಾತಿಯ ಮೂವರನ್ನು ಸೇರಿಸಿಕೊಳ್ಳಬೇಕು. ಅಲ್ಲದೇ ರಾಮಮಂದಿರದಲ್ಲಿ ಸಮ್ಮಳ ಬಾರಿಸಲು ತಮ್ಮ ಸಮುದಾಯಕ್ಕೆ ಅವಕಾಶ ನೀಡಬೇಕು. ಕಾರವಾರದಲ್ಲಿ ಸಮುದಾಯದವರಿಗೆ 10 ಎಕರೆ ಹಾಗೂತಾಲ್ಲೂಕುಗಳಲ್ಲಿ ತಲಾ ಐದು ಎಕರೆ ಜಮೀನು ಒದಗಿಸಬೇಕು. ಸಮುದಾಯಕ್ಕೆ ಪರ್ಯಾಯವಾಚಕ ಶಬ್ದವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮೆನುರ ಗ್ರಾಮದಲ ಯಲ್ಲಮ್ಮ ಮಂದಿರವು ಗೊಂದಳಿ ಸಮಾಜಕ್ಕೆ ಸೇರಿದ್ದಾಗಿದ್ದು, ಸಮುದಾಯಕ್ಕೆ ವಹಿಸಿಕೊಡಬೇಕು. ಪ್ರವರ್ಗ –1ರ ಅಡಿ ಸರ್ಕಾರ ಉದ್ಯೋಗಗಳಲ್ಲಿ ಗೊಂದಳಿ, ಜೋಶೀ ಜನಾಂಗದವರಿಗೆ ವಿಶೇಷ ಸ್ಥಾನಮಾನ ಒದಗಿಸಬೇಕು ಎಂದು ಮನವಿ ಮಾಡಿದರು.

ಇದೇವೇಳೆ, ನಗರದ ಕಾಳಿ ರಿವರ್ ಗಾರ್ಡನ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆಯಲ್ಲಿಬರಲಾಯಿತು.ಒಟ್ಟು 27 ಬೇಡಿಕೆಗಳು ಇರುವ ಮನವಿಯನ್ನು ಜಿಲ್ಲಾಧಿಕಾರಿ ಮೂಲಕಸರ್ಕಾರಕ್ಕೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗೊಂದಳಿ ಸಮಾಜ ಕ್ರಾಂತಿ ಮೋರ್ಚಾದ ಗೋವಾ ಘಟಕದ ಅಧ್ಯಕ್ಷ ಬಸವಂತ ಗಣಾಚಾರಿ, ಬೆಳಗಾವಿ ಘಟಕದ ಅಧ್ಯಕ್ಷ ಪಾಂಡು ದಾವಡೆ, ಕಾರವಾರ ಘಟಕದ ಅಧ್ಯಕ್ಷ ಮಲ್ಲೇಶ್ ಇಂಗಳೆ, ಯಲ್ಲಾಪುರ ಘಟಕದ ಅಧ್ಯಕ್ಷ ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.