ಶಿರಸಿ: ಇಲ್ಲಿನ ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ ಅವರ ಮನೆಯ ಎದುರು ಕಿಡಿಗೇಡಿಗಳು ಕುಂಬಳಕಾಯಿ ಬಲಿಕೊಟ್ಟು, ಕುಂಕುಮ ಚೆಲ್ಲಿ ಹೋಗಿದ್ದಾರೆ.
ವೆಂಕಟೇಶ ನಾಯ್ಕ ಅವರು ಶುಕ್ರವಾರ ಬೆಳಿಗ್ಗೆ ವಾಕಿಂಗ್ ಹೋಗಲು ಮನೆಯ ಗೇಟ್ ತೆಗೆದಾಗ ಈ ದೃಶ್ಯ ಕಂಡಿದೆ. ಇದನ್ನು ಕಂಡ ಅವರು, ತಕ್ಷಣ ಆಪ್ತರು, ಪೊಲೀಸರಿಗೆ ಮಾಹಿತಿ ನೀಡಿದರು. ಕುಂಬಳಕಾಯಿ, ಲಿಂಬು, ಹಿಟ್ಟಿನ ಗೊಂಬೆ ಮಾಡಿ, ಅದಕ್ಕೆ ಕಪ್ಪು ದಾರ ಸುತ್ತಿ ಅದರ ಮೇಲೆ ಕುಂಕುಮ ಚೆಲ್ಲಿರುವ ದೃಶ್ಯವನ್ನು ಅನೇಕರು ಭೇಟಿ ನೀಡಿ ನೋಡಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಕುರಿತು ಮಾತನಾಡಿದ ವೆಂಕಟೇಶ ನಾಯ್ಕ, ‘ದೇವಸ್ಥಾನದ ಅಭಿವೃದ್ಧಿ ಸಹಿಸದ ಯಾರೋ ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮಾರಿಕಾಂಬಾ ದೇವಿಯ ಮೇಲೆ ನಂಬಿಕೆಯಿದೆ. ಎಲ್ಲರಿಗೂ ದೇವಿಯ ಮೇಲೆ ಅಪರವಾದ ಭಕ್ತಿ ನಂಬಿಕೆ ಇದೆ. ಈ ಕೃತ್ಯ ಮಾಡಿದವರನ್ನು ದೇವಿ ನೋಡಿಕೊಳ್ಳುತ್ತಾಳೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.