ಶಿರಸಿ: ‘ನಿವೃತ್ತಿಯ ಬಳಿಕ ಆರೋಗ್ಯಪೂರ್ಣತೆ ಕಡೆ ನಮ್ಮ ದೃಷ್ಟಿ ಹರಿಸಬೇಕು. ಆರೋಗ್ಯವೇ ಬದುಕಿಗೆ ಚೈತನ್ಯವಾದರೆ ಲವಲವಿಕೆಯಿಂದ ಜೀವನ ನಡೆಸಬಹುದು’ ಎಂದು ಯಕ್ಷಗಾನ ಕವಿ ಮೃತ್ಯುಂಜಯ ಗಿಂಡಿಮನೆ ಹೇಳಿದರು.
ನಗರದ ರಂಗಧಾಮದಲ್ಲಿ ಶನಿವಾರ ಅವರು ಲೇಖಕ ರಾಮಚಂದ್ರ ಹೆಗಡೆ ಬಂಡಿಮನೆ ಅವರ ಆಂಗ್ಲಮೂಲದ, ಮೃತ್ಯುಂಜಯ ಗಿಂಡಿಮನೆ ಅವರು ಭಾಷಾಂತರಗೊಳಿಸಿದ 'ನಿವೃತ್ತಿಯ ನಂತರದ ಆರೋಗ್ಯ ಪೂರ್ಣ ಜೀವನ' ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಿವೃತ್ತಿಯ ನಂತರ ನಿರೋಗಿಯಾಗಿ ಬದುಕಬೇಕು. ಉಪಯೋಗಕರ ಬದುಕು ನಡೆಸಬೇಕು. ನಿವೃತ್ತಿ ಬಳಿಕ ವಯಸ್ಸಾಯಿತು ಎಂಬುದು ಬಿಡಬೇಕು. ಅದಕ್ಕಾಗಿ ಮನಸ್ಸು ಪ್ರಫುಲ್ಲವಾಗಿ ಇಟ್ಟುಕೊಳ್ಳಬೇಕು’ ಎಂದರು.
ಕೃತಿ ಬಿಡುಗಡೆಗೊಳಿಸಿದ ಪುಣೆಯ ನಿಸರ್ಗೋಪಚಾರ ಕೇಂದ್ರದ ಡಾ.ನಾರಾಯಣ ಹೆಗಡೆ, ‘ಇಂಥ ಕೃತಿಗಳು ನಿವೃತ್ತಿ ಬದುಕು ಎದುರಿಸಬೇಕಾದ ಸಂಗತಿ ತಿಳಿಸಿ ಮಾರ್ಗದರ್ಶನ ಮಾಡುತ್ತದೆ’ ಎಂದು ತಿಳಿಸಿದರು.
ಸಹಕಾರಿಗಳಾದ ರಾಮಕೃಷ್ಣ ಹೆಗಡೆ ಕಡವೆ ಕಾರ್ಯಕ್ರಮ ಉದ್ಘಾಟಿಸಿದರು. ಪುಸ್ತಕವನ್ನು ನಿವೃತ್ತ ಪ್ರಾಚಾರ್ಯ ಕೆ.ಎನ್.ಹೊಸಮನಿ ಪರಿಚಯಿಸಿದರು. ಸಾಹಿತಿ ಅನಂತ ತಮ್ಮನಕರ ಪರಿಚಯಿಸಿ ಅಭಿನಂದಿಸಿದರು. ಬರಹಗಾರ ಕೆ.ಆರ್.ಹೆಗಡೆ ಕಾನಸೂರು, ಸಾಮಾಜಿಕ ಕಾರ್ಯಕರ್ತ ವಿ.ಪಿ.ಹೆಗಡೆ, ಲೇಖಕ ರಾಮಚಂದ್ರ ಬಂಡಿಮನೆ ಇದ್ದರು.
ಕಥೆಗಾರ ಡಿ.ಎಸ್.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಎಂ.ಎನ್.ಹೆಗಡೆ ಸ್ವಾಗತಿಸಿದರು. ರೋಹಿಣಿ ಹೆಗಡೆ, ರೇಣುಕಾ ನಾಗರಾಜ, ದಾಕ್ಷಾಯಿಣಿ ಪಿಸಿ ನಿರ್ವಹಿಸಿದರು. ಶಾಂತಾರಾಮ ಬಂಡಿಮನೆ ವಂದಿಸಿದರು. ಹಿರಿಯ ನಾಗರಿಕರ ಸಂಘಟನೆ, ಗಾಯತ್ರಿ ಗೆಳೆಯರ ಬಳಗ ಕಾರ್ಯಕ್ರಮ ಆಯೋಜಿಸಿತ್ತು.
ಪುಸ್ತಕದ ವಿವರ ಕೃತಿ:ನಿವೃತ್ತಿಯ ನಂತರದ ಆರೋಗ್ಯ ಪೂರ್ಣ ಜೀವನ ಪ್ರಕಾಶಕ:ಅನನ್ಯ ಪ್ರಕಾಶನ ಮೈಸೂರು ಪುಟ:280 ದರ: ₹350
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.