ಶಿರಸಿ: ತಾಲ್ಲೂಕಲ್ಲಿ ಸೋಮವಾರ ಗಾಳಿ ಸಹಿತ ಜೋರು ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು.
ಮಧ್ಯಾಹ್ನ 12 ಗಂಟೆಯಿಂದ ಆರಂಭವಾದ ಮಳೆ ಸಂಜೆಯವರೆಗೂ ಸುರಿಯಿತು. ನಡುವೆ ಜೋರಾದ ಗಾಳಿ ಬೀಸಿದ ಪರಿಣಾಮ ಮಳೆಯ ಅಬ್ಬರ ತುಸು ಹೆಚ್ಚಿತ್ತು.
ದುಂಡಶಿನಗರ, ಅಶೋಕನಗರ, ಅಶ್ವಿನಿ ಸರ್ಕಲ್ ಸೇರಿದಂತೆ ಹಲವೆಡೆ ರಸ್ತೆಯ ಮೇಲೆ ನೀರು ನಿಂತ ಪರಿಣಾಮ ವಾಹನ ಸವಾರರು ತೀವ್ರ ಪರದಾಡಿದರು.
ನಗರದ ತಗ್ಗು ಪ್ರದೇಶದ ಕೆಲವು ಮನೆಗಳ ಸಮೀಪದ ಚರಂಡಿಗಳು ಕಟ್ಟಿ ನೀರು ಉಕ್ಕಿದ ಪರಿಣಾಮ ಮನೆಗಳ ಆವರಣಕ್ಕೆ ನೀರು ನುಗ್ಗಿತ್ತು. ಕೆಲವೆಡೆ ಮರ, ಗಿಡಗಳು ಉರುಳಿದವು.
ಅಬ್ಬರದ ಮಳೆಗೆ ಅಘನಾಶಿನಿ, ವರದಾ, ಶಾಲ್ಮಲಾ ನದಿಗಳ ನೀರಿನ ಮಟ್ಟ ಹೆಚ್ಚಿದೆ. ಕೃಷಿ ಕಾಯಕಕ್ಕೆ ಪೂರಕವಾಗಿ ಸುರಿದ ಮಳೆಯ ಕಾರಣ ರೈತಾಪಿ ವರ್ಗ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.