ADVERTISEMENT

ಶಿರಸಿ: ನೆರೆ ಸಂತ್ರಸ್ತರಿಗೆ ಸೂರು ನಿರ್ಮಾಣಕ್ಕೆ ನೆರವು

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 5:30 IST
Last Updated 29 ಜುಲೈ 2021, 5:30 IST
ಶಿರಸಿ ತಾಲ್ಲೂಕಿನ ರೇವಣಕಟ್ಟಾದಲ್ಲಿ ನೆರೆಯಿಂದ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆಗೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅಗತ್ಯ ಪರಿಕರ ಒದಗಿಸಿದರು
ಶಿರಸಿ ತಾಲ್ಲೂಕಿನ ರೇವಣಕಟ್ಟಾದಲ್ಲಿ ನೆರೆಯಿಂದ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆಗೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅಗತ್ಯ ಪರಿಕರ ಒದಗಿಸಿದರು   

ಶಿರಸಿ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡು ಅತಂತ್ರರಾದ ತಾಲ್ಲೂಕಿನ ರೇವಣಕಟ್ಟಾದ ಹದಿನೈದಕ್ಕೂ ಹೆಚ್ಚು ಕುಟುಂಬಗಳು ತಾತ್ಕಾಲಿಕ ಸೂರು ನಿರ್ಮಿಸಿಕೊಳ್ಳಲು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ನೆರವು ನೀಡಿದ್ದಾರೆ.

ಸುರಕ್ಷಿತ ಸ್ಥಳದಲ್ಲಿ ಸಂತ್ರಸ್ತರು ತಾತ್ಕಾಲಿಕವಾಗಿ ವಸತಿ ಮಾಡಲು ಮನೆ ನಿರ್ಮಿಸಿಕೊಳ್ಳುತ್ತಿದ್ದು, ಅದಕ್ಕೆ ಅಗತ್ಯವಿರುವ ಶೀಟ್‌ಗಳು, ನೆಲಹಾಸು ಕಲ್ಲುಗಳನ್ನು ಸ್ವಂತ ವೆಚ್ಚದಲ್ಲಿ ಪೂರೈಸಿದ್ದಾರೆ. ಈ ಮೂಲಕ ಸಂತ್ರಸ್ತರಲ್ಲಿ ಧೈರ್ಯ ತುಂಬಿದ್ದಾರೆ.

ನೆರೆ ಸ್ಥಿತಿ ಸಂಭವಿಸಿದ್ದ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಅವರು ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದರು. ಅಗತ್ಯ ನೆರವು ನೀಡುವ ಭರವಸೆ ನೀಡಿದ್ದರು. ಮಂಗಳವಾರವೇ ರೇವಣಕಟ್ಟಾ ಗ್ರಾಮಕ್ಕೆ ಅಗತ್ಯ ಪರಿಕರಗಳನ್ನು ಕಳುಹಿಸಿಕೊಡಲಾಗಿತ್ತು. ಬುಧವಾರ ಸಂತ್ರಸ್ತರಿಗೆ ಪುನಃ ಧೈರ್ಯ ತುಂಬಿ ಅವುಗಳನ್ನು ಹಸ್ತಾಂತರಿಸಿದರು.

ADVERTISEMENT

ಇಟಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನವಗ್ರಾಮ ಇನ್ನಿತರ ಕಡೆಗಳ ನೆರೆಬಾಧಿತ ಸ್ಥಳಗಳಿಗೂ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಇಲ್ಲಿನ ಕೆರಿಯಾ ಗೌಡ, ಸೀತಾರಾಮ, ಅಶೋಕ, ಬೆಳ್ಳಿ ಇನ್ನಿತರರ ಮನೆಗೆ ಭೇಟಿ ನೀಡಿ ನೆರವು ಒದಗಿಸುವ ಭರವಸೆ ನೀಡಿದ್ದಾರೆ.

‘ಅತಿವೃಷ್ಟಿಯಿಂದ ಜನರು ಕಷ್ಟ ಎದುರಿಸುತ್ತಿದ್ದಾರೆ. ವ್ಯಾಪಕ ಪ್ರಮಾಣ ಆಸ್ತಿ, ಬೆಳೆ ಹಾನಿಗೀಡಾಗಿದೆ. ಇಂತಹ ಸಂಕಷ್ಟದಲ್ಲಿ ಜನಪ್ರತಿನಿಧಿಗಳು ಜರನ ನೆರವಿಗೆ ಧಾವಿಸದಿರುವುದು ಸರಿಯಲ್ಲ’ ಎಂದು ಭೀಮಣ್ಣ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಮುಖರಾದ ಎಸ್.ಕೆ. ಭಾಗವತ, ಜಗದೀಶ ಗೌಡ, ವಿ.ಎಂ. ಹೆಗಡೆ, ಗೀತಾ ಭೋವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.