ಭಟ್ಕಳ: ಈ ಬಾರಿಯ ಮಳೆಗಾಲ ಮಾಡಿದ ಅನಾಹುತಗಳನ್ನು ಜನರು ಮರೆಯುವಂತೆಯೇ ಇಲ್ಲ. ಜಿಲ್ಲೆಯ ಇತರ ತಾಲ್ಲೂಕುಗಳಿಗೆ ಹೋಲಿಸಿದರೆ ಭಟ್ಕಳದಲ್ಲಿ ಆದ ಹಾನಿಯ ಪ್ರಮಾಣ ಕಡಿಮೆ. ಆದರೂ ವ್ಯಾಪಕ ಮಳೆಗೆ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳು ಗುಂಡಿ ಬಿದ್ದಿವೆ. ವಾಹನ ಸವಾರರು ಪರದಾಡುತ್ತಿದ್ದಾರೆ.
ತಾಲ್ಲೂಕಿನ ಬೈಲೂರು ಕ್ರಾಸ್ನಿಂದ ಬೆಳಕೆ ಗಡಿಯವರೆಗೆ ಹಾದುಹೋಗಿರುವ ಸುಮಾರು 25 ಕಿ.ಮೀ ಹೆದ್ದಾರಿಯಲ್ಲಿ ಗುಂಡಿಗಳದ್ದೇ ಕಾರುಬಾರು. ಹೆದ್ದಾರಿಯ ಡಾಂಬರು ರಭಸದ ಮಳೆಗೆ ಕಿತ್ತುಹೋಗಿ ಬರೀ ಗುಂಡಿಗಳೇಕಾಣುತ್ತಿವೆ. ಕೆಲವೆಡೆ ನಾಲ್ಕೈದು ಅಡಿ ಅಗಲದ ಗುಂಡಿಗಳಾಗಿವೆ. ಉತ್ತರದಲ್ಲಿ ಬೈಲೂರು, ದಕ್ಷಿಣದಲ್ಲಿ ಬೆಳಕೆ ಗಡಿ ದಾಟುವುದೇಸವಾಲಾಗಿದೆ.
ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ರೈಲು ನಿಲ್ದಾಣಕ್ಕೆ ತೆರಳುವ ರಸ್ತೆ, ಮುಂಡಳ್ಳಿ, ಮೂಡುಭಟ್ಕಳ, ತೆಂಗಿನಗುಂಡಿ, ಮಾರುಕೇರಿಯ ರಸ್ತೆಗಳಲ್ಲಿ ಕೆಸರು ತುಂಬಿದೆ.ಆಗಾಗಮಳೆ ಬರುತ್ತಿರುವ ಕಾರಣ ರಸ್ತೆಗಳು ಮತ್ತಷ್ಟು ಹದಗೆಡಬಹುದು ಎಂದು ರಿಕ್ಷಾ ಚಾಲಕ ಗಣಪತಿ ನಾಯ್ಕ ಆತಂಕ ವ್ಯಕ್ತಪಡಿಸುತ್ತಾರೆ.
ಬಾಡಿಗೆ ಹೋಗಲು ಹಿಂದೇಟು: ಮುಂಡಳ್ಳಿಯೂ ಸೇರಿ ಹಲವು ಕಡೆ ಆಟೊದವರು ಬಾಡಿಗೆಗೆ ಹೋಗುವುದಕ್ಕೆ ಹಿಂಜರಿಯುವಂತಾಗಿದೆ. ‘ಹಾಳಾದ ರಸ್ತೆಗಳಲ್ಲಿ ಹೋದರೆ ವಾಹನ ಸರಿಯಾಗಿ ಉಳಿಯುತ್ತದೆ ಎಂಬ ನಂಬಿಕೆಯಿಲ್ಲ. ಜತೆಗೆ ಪ್ರಯಾಣಿಕರೂಈ ರಸ್ತೆಗಳಲ್ಲಿ ಆಟೊದಲ್ಲಿ ಹೋಗಲು ಮನಸ್ಸು ಮಾಡುತ್ತಿಲ್ಲ’ ಎಂಬುದು ಚಾಲಕರ ಅಳಲು.
‘ಗ್ರಾಮೀಣ ಭಾಗದಿಂದ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಶಾಲಾ ವಾಹನಗಳು ಹೋಗಬೇಕು. ಆದರೆ, ಅಲ್ಲಿಗೆ ತೆರಳುವುದಕ್ಕೆ ಚಾಲಕರು ಹಿಂಜರಿಯುತ್ತಿದ್ದಾರೆ. ಮಳೆಗಾಲಕ್ಕೂ ಮೊದಲು ಐದಾರು ತಿಂಗಳ ಹಿಂದೆ ನಿರ್ಮಿಸಿದ ಹಲವು ರಸ್ತೆಗಳಲ್ಲಿ ಡಾಂಬರು ಕಿತ್ತು ಬಂದಿದೆ. ಈ ರಸ್ತೆಗಳ ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸಬೇಕಾಗುತ್ತದೆ. ಮಳೆಗಾಲ ಕಳೆದ ಮೇಲಾದರೂ ರಸ್ತೆ
ಗಳು ದುರಸ್ತಿಯಾಗುತ್ತವೋ ನೋಡಬೇಕು’ ಎನ್ನುತ್ತಾರೆನ್ಯೂ ಶಮ್ಸ್ ಸ್ಕೂಲ್ ಮುಖ್ಯಶಿಕ್ಷಕ ರಝಾ ಮಾನ್ವಿ.
₹ 100 ಕೋಟಿ ಬಿಡುಗಡೆ:‘ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿರಸ್ತೆಗಳೇ ಇಲ್ಲದ ಗ್ರಾಮೀಣ ಭಾಗಗಳಲ್ಲಿ ಹೊಸ ರಸ್ತೆಗಳ ನಿರ್ಮಾಣಕ್ಕೆ ಹಾಗೂ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಒಂದೂವರೆ ವರ್ಷದಲ್ಲಿ ಸುಮಾರು ₹ 100 ಕೋಟಿ ಅನುದಾನ ಮಂಜೂರಾಗಿದೆ. ಉತ್ತಮ ರಸ್ತೆಗಳ ನಿರ್ಮಾಣ ಮತ್ತು ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಂಡು ರಸ್ತೆಗಳ ದುರಸ್ತಿ ಮಾಡಲಾಗುತ್ತದೆ’ ಎಂದು ಶಾಸಕ ಸುನೀಲ್ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಕೃತಿ ವಿಕೋಪ ಹಾಗೂ ಭಾರಿಮಳೆಯಿಂದ ಹಾನಿಗೊಳಗಾದ ರಸ್ತೆ, ಮನೆಗಳ ದುರಸ್ತಿ ಮತ್ತು ಇತರಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ ₹ 25 ಕೋಟಿಯನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದ್ದಾರೆ. ತಕ್ಷಣ ಕ್ರಿಯಾ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.