ಶಿರಸಿ: ಅಯೋಧ್ಯೆ ರಾಮಮಂದಿರ ನಿರ್ಮಾಣದ ಭೂಮಿಪೂಜೆಯ ವೇಳೆ ಪವಿತ್ರ ಸ್ಥಳದಲ್ಲಿ ಅರ್ಪಿಸಲು ಕರ್ನಾಟಕ ಉತ್ತರ ಪ್ರಾಂತದಿಂಧ 108 ಪುಣ್ಯಕ್ಷೇತ್ರಗಳ ತೀರ್ಥ ಹಾಗೂ ಮೃತ್ತಿಕೆಗಳನ್ನು ಕಳುಹಿಸಿಕೊಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಿಂದ ರಾಮತೀರ್ಥ, ಕೋಟಿತೀರ್ಥದ ತೀರ್ಥವನ್ನು ಈಗಾಗಲೇ ಕಳುಹಿಸಲಾಗಿದೆ. ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿ ಮಠ, ಸೋದೆ ವಾದಿರಾಜ ಮಠ, ಸ್ವಾದಿ ದಿಗಂಬರ ಜೈನಮಠಗಳಿಂದ ಮೃತ್ತಿಕೆ, ಶಾಲ್ಮಲಾ ನದಿಯ ತೀರ್ಥ, ಬನವಾಸಿ ಮಧುಕೇಶ್ವರ ದೇವಾಲಯದಿಂದ ವರದಾ ನದಿ ತೀರ್ಥ, ಮೃತ್ತಿಕೆ, ಮಾರಿಕಾಂಬಾ ದೇವಾಲಯದಿಂದ ಮೃತ್ತಿಕೆಯನ್ನು ಸಂಗ್ರಹಿಸಲಾಗಿದೆ. ಇದನ್ನು ಕೋರಿಯರ್ ಮೂಲಕ ಅಯೋಧ್ಯೆಗೆ ತಲುಪಿಸಲಾಗುತ್ತದೆ’ ಎಂದರು.
1989ರಲ್ಲೇ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದೆ. ನಂತರ ಅನೇಕ ಘಟನಾವಳಿಗಳು ನಡೆದಿವೆ. ಮಂದಿರ ನಿರ್ಮಾಣಕ್ಕೆ ಪ್ರಸ್ತುತ ಮತ್ತೊಮ್ಮೆ ಆಗಸ್ಟ್ 5ರಂದು ಭೂಮಿಪೂಜೆ ನೆರವೇರಲಿದೆ. ಕೋವಿಡ್ 19 ಕಾರಣಕ್ಕೆ ಭಕ್ತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿಲ್ಲ. ಆದರೆ, ಮನೆಯಲ್ಲಿ ಪತಾಕೆ ಹಾರಿಸಿ, ರಂಗೋಲಿ ಹಾಕಿ, ಶ್ರೀರಾಮನನ್ನು ಆರಾಧಿಸಿದ ಪ್ರಸಾದವನ್ನು ಹಂಚಿ ಆನಂದೋತ್ಸವವನ್ನು ಪ್ರಕಟಿಸಬಹುದು. ಅಂದು ಬೆಳಿಗ್ಗೆ 10.30ಕ್ಕೆ ದೂರದರ್ಶನದಲ್ಲಿ ಕಾರ್ಯಕ್ರಮದ ನೇರ ಪ್ರಸಾರವಿರುತ್ತದೆ. ಅವಕಾಶವಿರುವ ಮಠ–ಮಂದಿರ, ಆಶ್ರಮ, ಗುರುದ್ವಾರ, ಪೂಜಾ ಸ್ಥಳಗಳಳ್ಲಿ ಪರದೆಗಳ ಮೂಲಕ ಸಾರ್ವಜನಿಕರ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆಗೊಳಿಸಬಹುದು ಎಂದು ಹೇಳಿದರು.
ರಕ್ಷಾ ಬಂಧನಕ್ಕೆ ಈ ಬಾರಿ ಚೀನಾ ರಾಖಿಯನ್ನು ಬಳಸಬಾರದೆಂದು ನಿರ್ಧರಿಸಲಾಗಿದೆ. ಸಾಂಕ್ರಾಮಿಕ ಕಾಯಿಲೆ ಇರುವುದರಿಂದ ಈ ವರ್ಷ ಕೊರೊನಾ ವಾರಿಯರ್ಸ್ಗಳಿಗೆ ಮಾತ್ರ ಪರಿಷತ್ ವತಿಯಿಂದ ರಕ್ಷೆ ಕಟ್ಟಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ಗಂಗಾಧರ ಹೆಗಡೆ, ಗುರುಪ್ರಸಾದ ಹರ್ತೆಬೈಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.