
ಶರಾವತಿ ಭೂಗತ ವಿದ್ಯುತ್ ಯೋಜನೆ ಜಾರಿಯಾಗಲಿರುವ ಪ್ರದೇಶದ ಗೂಗಲ್ ನಕ್ಷೆ.
ಹೊನ್ನಾವರ: ಶರಾವತಿ ಭೂಗತ ವಿದ್ಯುತ್ ಯೋಜನೆ (ಶರಾವತಿ ಪಂಪ್ಡ್ ಸ್ಟೋರೇಜ್) ಅವೈಜ್ಞಾನಿಕವಾಗಿರುವ ಜೊತೆಗೆ ಪರಿಸರ ಹಾಗೂ ಜನಜೀವನಕ್ಕೆ ಹಾನಿ ಉಂಟುಮಾಡುತ್ತದೆ. ಹೀಗಾಗಿ ಪ್ರಸ್ತುತ ಯೋಜನೆಯನ್ನು ಕೈಬಿಡಬೇಕು’ ಎಂದು ಶರಾವತಿ ನದಿ ದಂಡೆಗಳಲ್ಲಿರುವ ಕುದ್ರಿಗಿ ಹಾಗೂ ನಗರಬಸ್ತಿಕೇರಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಕುದ್ರಿಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹ್ಮದ್ ಫೈಸಲ್ ಬಾವಾಫಕ್ಕಿ ಹಾಗೂ ನಗರಬಸ್ತಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಿತಾ ಹೆಗಡೆ ಡಿ. 6ರಂದು ಮುಖ್ಯಮಂತ್ರಿಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ.
‘ಯೋಜನೆಗಾಗಿ 1,800 ಟನ್ ಸ್ಫೋಟಕ ಬಳಸಿ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮಘಟ್ಟದಲ್ಲಿ 7 ಕಿ.ಮೀ. ಸುರಂಗ ಕೊರೆಯಲಾಗುತ್ತಿದೆ. ಸಿಂಗಳೀಕದಂಥ ಅಳಿವಿನಂಚಿನ ಅಪರೂಪದ ಪ್ರಾಣಿ ಸೇರಿದಂತೆ ಅಪಾರ ಜೀವಸಂಕುಲಕ್ಕೆ ಯೋಜನೆ ಜಾರಿಯಿಂದ ಸಂಚಕಾರ ಬರಲಿದೆ. ಪಶ್ಚಿಮ ಘಟ್ಟದಲ್ಲಿ ಯೋಜನೆ ಜಾರಿಗೊಳಿಸಿದರೆ ವೈನಾಡಿನಲ್ಲಿ ನಡೆದಂತೆ ಪ್ರಕೃತಿ ವಿಕೋಪ ಸಂಭವಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಿದ್ಯುತ್ ಉತ್ಪಾದನೆಗೆ ಮೇಲ್ಮುಖವಾಗಿ ನೀರು ಪಂಪ್ ಮಾಡಿದರೆ ಶರಾವತಿ ನದಿಯಲ್ಲಿ ನೀರಿನ ಹರಿವಿನ ವೇಗ ಕಡಿಮೆಯಾಗಿ ಅಲ್ಲಿ ಸಮುದ್ರದ ಉಪ್ಪು ನೀರು ನುಗ್ಗುವ ಅಪಾಯ ಹೆಚ್ಚಲಿದೆ. ಜನರು ನಿರ್ವಸತಿಕರಾಗುವ ಜೊತೆಗೆ ರಾಣಿ ಚನ್ನಭೈರಾದೇವಿ ಕಾಲದ ಐತಿಹಾಸಿಕ ಸ್ಮಾರಕಗಳಿಗೂ ಯೋಜನೆಯಿಂದ ಧಕ್ಕೆಯಾಗಲಿದೆ’ ಎಂದು ಅವರು ಪತ್ರದಲ್ಲಿ ಯೋಜನೆಯ ದುಷ್ಪರಿಣಾಮಗಳನ್ನು ವಿವರಿಸಿದ್ದಾರೆ.
ಯೋಜನೆಯನ್ನು ವಿರೋಧಿಸಿ ಗ್ರಾಮ ಸಭೆಗಳಲ್ಲಿ ತೆಗೆದುಕೊಂಡಿರುವ ನಿರ್ಣಯದ ಕುರಿತು ಅವರು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.