ಶಿರಸಿ: ‘ಸ್ಥಳೀಯವಾಗಿ ಉದ್ಯಮ ಬೆಳೆದರೆ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಇದರಿಂದ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಗುರುವಾರ ಇಲ್ಲಿನ ಸುಪ್ರಿಯಾ ಇಂಟರ್ನ್ಯಾಷನಲ್ ಹೋಟೆಲ್ ಉದ್ಘಾಟಿಸಿ ಮಾತನಾಡಿದ ಅವರು, ‘ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿದೆ. ಅದಕ್ಕೆ ತಕ್ಕಂತೆ ಆತಿಥ್ಯ ಕ್ಷೇತ್ರವೂ ಸುಧಾರಿಸಬೇಕು. ಈ ದಿಶೆಯಲ್ಲಿ ಭೀಮಣ್ಣ ನಾಯ್ಕ ಉತ್ತಮ ದರ್ಜೆಯ ಹೋಟೆಲ್ ನಿರ್ಮಿಸಿರುವುದು ಅಭಿವೃದ್ಧಿಗೆ ಪೂರಕ ಬೆಳವಣಿಗೆ’ ಎಂದು ಶ್ಲಾಘಿಸಿದರು.
ಚಿತ್ರನಟ ಡಾ.ಶಿವರಾಜಕುಮಾರ್ ಮಾತನಾಡಿ, ‘ಹೋಟೆಲ್ ಸಿಬ್ಬಂದಿ ಕುಟುಂಬದ ಸದಸ್ಯರಂತೆ ಶ್ರದ್ಧೆಯಿಂದ ಅತಿಥಿ ಸತ್ಕಾರ ಮಾಡಲಿ. ರಾಷ್ಟ್ರ ಮಟ್ಟದಲ್ಲೇ ಸುಪ್ರಿಯಾ ಇಂಟರ್ನ್ಯಾಷನಲ್ ಹೆಸರು ಮಾಡಲಿ’ ಎಂದರು.
ಶಾಸಕ ಆರ್.ವಿ.ದೇಶಪಾಂಡೆ, ‘ಉದ್ಯೋಗಕ್ಕಾಗಿ ವಲಸೆ ಹೋಗುವ ಬದಲು ಜಿಲ್ಲೆಯಲ್ಲೇ ಯುವಕರು ಕೃಷಿ, ಸ್ವಉದ್ಯಮದ ಮೂಲಕ ಉದ್ಯೋಗ ಕಂಡುಕೊಳ್ಳಬೇಕು’ ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ‘ಕೃಷಿಕರಾದವರು ಉದ್ಯಮದಲ್ಲಿ ಅನುಭವ ಪಡೆದು ಉತ್ತಮ ದರ್ಜೆಯ ಹೋಟೆಲ್ ನಿರ್ಮಿಸಿರುವುದು ಸಾಹಸ. ಇದು ಇತರ ಕೃಷಿಕರಿಗೂ ಮಾದರಿಯಾಗಲಿ’ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಅಭಿವೃದ್ಧಿ ಚಟುವಟಿಕೆಯಲ್ಲಿ ಸರ್ಕಾರದ ಜತೆಗೆ ಖಾಸಗಿ ಸಹಭಾಗಿತ್ವವೂ ಬೇಕು. ಶಿರಸಿಯ ಅಭಿವೃದ್ಧಿಗೆ ಪೂರಕವಾಗಿ ಉತ್ತಮ ದರ್ಜೆಯ ಹೋಟೆಲ್ ರೂಪುಗೊಂಡಿದೆ’ ಎಂದರು.
ಮಾಜಿ ಶಾಸಕ ಮಧು ಬಂಗಾರಪ್ಪ, ಕಾಂಗ್ರೆಸ್ ಮುಖಂಡ ಅಶೋಕ ಪಟ್ಟಣ, ದಿ ಪ್ರಿಂಟರ್ಸ್ ಮೈಸೂರು ಪ್ರೈ ಲಿ. ಜೆಎಂಡಿ ಕೆ.ಎನ್.ತಿಲಕ್ ಕುಮಾರ್, ಸುಜಾತಾ ತಿಲಕಕುಮಾರ್, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಶಿರಸಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಯದೇವ ನೀಲೆಕಣಿ, ಗೀತಾ ಶಿವರಾಜಕುಮಾರ್, ಅನಿತಾ ಪವನ್,ಅಶ್ವಿನ್ ನಾಯ್ಕ, ಗೀತಾ ನಾಯ್ಕ, ಇತರರು ಇದ್ದರು. ಹೊಟೆಲ್ ಮಾಲೀಕ ಭೀಮಣ್ಣ ನಾಯ್ಕ ಸ್ವಾಗತಿಸಿದರು. ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.