ಕಾರವಾರ: ಹೊನ್ನಾವರದ ಉದಯಗಿರಿಯಲ್ಲಿರುವ ಜಾನಪದ ವಿಶ್ವ ಪ್ರತಿಷ್ಠಾನವು 2020, 2021 ಹಾಗೂ 2022ರ ಸಾಲಿನ ವಿವಿಧ ‘ಜಾನಪದ ದೀಪ’ ಪ್ರಶಸ್ತಿಗಳನ್ನು ಪ್ರಕಟಿಸಿದೆ.
‘ಕುವೆಂಪು ದೀಪ ಪ್ರಶಸ್ತಿ’ಗೆ ಮಂಗಳೂರಿನ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ (2020), ಧಾರವಾಡದ ಕನ್ನಡ ವಿಶ್ವವಿದ್ಯಾಲಯದ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ.ನಿಜಲಿಂಗಪ್ಪ ಮಟ್ಟಿಹಾಳ (2021) ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕಾ.ವೆಂ.ಶ್ರೀನಿವಾಸ ಮೂರ್ತಿ (2022) ಅವರನ್ನು ಆಯ್ಕೆ ಮಾಡಲಾಗಿದೆ.
‘ಶಿವರಾಮ ಕಾರಂತ ದೀಪ ಪ್ರಶಸ್ತಿ’ಗೆ ಧಾರವಾಡದ ವಿಶ್ರಾಂತ ಪ್ರಾಧ್ಯಾಪಕಿ ಡಾ.ಶಾಲಿನಿ ರಘುನಾಥ (2020), ಧಾರವಾಡದ ವಿಶ್ರಾಂತ ಪ್ರಾಧ್ಯಾಪಕಿ ಡಾ.ಶಾಂತಾ ಇಮ್ರಾಪುರ (2021) ಹಾಗೂ ಕುಮಟಾದ ಯಕ್ಷಗಾನ ಕಲಾವಿದ ಮೋಹನ ನಾಯಕ ಕೂಜಳ್ಳಿ, ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಅಧ್ಯಕ್ಷ ಡಾ.ವಿ.ಎಲ್.ಪಾಟೀಲ್ (2022) ಅವರನ್ನು ಆಯ್ಕೆ ಮಾಡಲಾಗಿದೆ.
‘ದೇವಮ್ಮ ರಾಮ ನಾಯಕ ದೀಪ ಪ್ರಶಸ್ತಿ’ಗೆ ಅಂಕೋಲಾ ಅಚವೆಯ ಕರಕುಶಲ ಕಲಾವಿದ ಮಹಾದೇವ ಬೊಮ್ಮಯ್ಯ ಗುನಗ (2020), ಹೊನ್ನಾವರ ಗುಣವಂತೆಯ ಜನಪದ ಗೀತೆ ಕಲಾವಿದೆ ಕೇಸಿ ಗೋವಿಂದ ಗೌಡ (2021) ಹಾಗೂ ಅಂಕೋಲಾ ಚೆನಗಾರದ ಸಾಂಪ್ರದಾಯಿಕ ಅಡುಗೆ ತಜ್ಞೆ ಶಾಲಿನಿ ಭಟ್ಟ (2022) ಭಾಜನರಾಗಲಿದ್ದಾರೆ.
‘ಪ್ರತಿಭಾ ವಿದ್ಯಾರ್ಥಿ ದೀಪ ಪ್ರಶಸ್ತಿ’ಗೆ ಕಾರವಾರದ ಮೀನಾಕ್ಷಿ ಪಾಟೀಲ (2020), ಅಂಕೋಲಾ ಬೇಲೆಕೇರಿಯ ಡಾ.ಶಾಂತಲಾ ಕಲಗುಜ್ಜಿ (2021) ಮತ್ತು ಉಡುಪಿಯ (ಅಂಕೋಲಾ ಬೆಳಸೆ ನಿವಾಸಿ) ಅರ್ಚಿತಾ ನಾಯಕ (2022) ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ 30ರಂದು ಬೆಳಿಗ್ಗೆ 11ಕ್ಕೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.