ADVERTISEMENT

'ಮೈತ್ರಿ' ರ್‍ಯಾಲಿಯಲ್ಲಿ ಬಲ ಪ್ರದರ್ಶನ; ಕೊನೆಯ ಪ್ರಚಾರದಲ್ಲೂ ಬಹಿರಂಗಗೊಂಡ ಒಡಕು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 13:26 IST
Last Updated 21 ಏಪ್ರಿಲ್ 2019, 13:26 IST
ಶಿರಸಿಯಲ್ಲಿ ನಡೆದ ರ್‍ಯಾಲಿಯಲ್ಲಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಮಾತನಾಡುತ್ತಿರುವ ಭೀಮಣ್ಣ ನಾಯ್ಕ ಕಾರ್ಯಕರ್ತ ಜತೆ ಅಸಮಾಧಾನ ಹೊರಹಾಕಿದರು
ಶಿರಸಿಯಲ್ಲಿ ನಡೆದ ರ್‍ಯಾಲಿಯಲ್ಲಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಮಾತನಾಡುತ್ತಿರುವ ಭೀಮಣ್ಣ ನಾಯ್ಕ ಕಾರ್ಯಕರ್ತ ಜತೆ ಅಸಮಾಧಾನ ಹೊರಹಾಕಿದರು   

ಶಿರಸಿ: ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಲೋಕಸಭೆ ಚುನಾವಣೆಯ ಕೊನೆಯ ಬಹಿರಂಗ ಪ್ರಚಾರವು ಎರಡು ಪಕ್ಷಗಳ ಕಾರ್ಯಕರ್ತರ ನಡುವಿನ ಗೊಂದಲದಲ್ಲಿ ಮುಕ್ತಾಯಗೊಂಡಿತು.

ಭಾನುವಾರ ಮಧ್ಯಾಹ್ನ ಮಾರಿಗುಡಿಯಿಂದ ಹೊರಟ ರೋಡ್‌ ಶೋದಲ್ಲಿ ಜೆಡಿಎಸ್‌–ಕಾಂಗ್ರೆಸ್‌ನ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಕೂಡ ರ್‍ಯಾಲಿಯಲ್ಲಿದ್ದರು. ಅರ್ಧದಲ್ಲಿ ಬಂದು ಸೇರಿಕೊಂಡ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರು ತೆರೆದ ವಾಹನದಲ್ಲಿ ಜನರಿಗೆ ಕೈ ಮುಗಿಯುತ್ತ ಸಾಗಿದರು. ಆಗಲೂ ಅಂತರವನ್ನು ಕಾಯ್ದುಕೊಂಡಿದ್ದ ಭೀಮಣ್ಣ, ನಂತರ ಹಳೇ ಬಸ್ ನಿಲ್ದಾಣ ವೃತ್ತದಲ್ಲಿ ವಾಹನವೇರಿ ಅಸ್ನೋಟಿಕರ್ ಜತೆ ನಿಂತರು. ಆದರೆ, ಅಸ್ನೋಟಿಕರ್ ಭಾಷಣ ಮಾಡುತ್ತಿರುವಾಗಲೇ, ಮುಂದೆ ಸಾಗಿ ಎಂದು ಸೂಚನೆ ನೀಡುವ ಮೂಲಕ ಭೀಮಣ್ಣ ಅಸಮಾಧಾನ ಹೊರಹಾಕಿದರು.

‘ತಡವಾಗಿ ಟಿಕೆಟ್ ಘೋಷಣೆಯಾಗಿದ್ದರಿಂದ ಪ್ರತಿ ಮನೆ ತಲುಪಲು ಸಾಧ್ಯವಾಗಿಲ್ಲ. ಕಾರ್ಯಕರ್ತರು ಮೊಬೈಲ್ ಮೂಲಕ ಸಂಬಧಿಗಳು, ಹತ್ತಿರದವರನ್ನು ಸಂಪರ್ಕಿಸಿ ಮತಯಾಚಿಸಬೇಕು. ಈ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದುಳಿಯಲು ಅನಂತಕುಮಾರ್ ಹೆಗಡೆ ಕಾರಣರಾಗಿದ್ದಾರೆ. ಅವರ ಧರ್ಮ, ಜಾತಿ ರಾಜಕಾರಣದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕು’ ಎಂದು ಅಸ್ನೋಟಿಕರ್ ವಿನಂತಿಸಿದರು.

ADVERTISEMENT

ನಗರದ ವಿವಿಧ ಬೀದಿಗಳಲ್ಲಿ ರ್‍ಯಾಲಿ ಸಂಚರಿಸಿತು. ಕೆಲವು ಕಾರ್ಯಕರ್ತರು ಪಕ್ಷಗಳ ಚಿಹ್ನೆಯಿರುವ ಟೊಪ್ಪಿ ಹಾಕಿದ್ದರೆ, ಇನ್ನು ಕೆಲವರು ಕೇಸರಿ ಪೇಟ ತೊಟ್ಟಿದ್ದರು. ಡೊಳ್ಳು ಕುಣಿತ ತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು.

ರೋಡ್ ಶೋ ಆರಂಭವಾಗುತ್ತಿದ್ದಂತೆ ಕೆಲವರು ಮೋದಿ, ಮೋದಿ ಎಂದು ಕೂಗಿದರು. ಇದರಿಂದ ಆಕ್ರೋಶಗೊಂಡ ಇನ್ನು ಕೆಲವರು ರಾಹುಲ್, ರಾಹುಲ್ ಎಂದು ಕೂಗಿದರು. ಕಾರ್ಯಕರ್ತರ ನಡುವಿನ ವಾಗ್ವಾದವನ್ನು ಪೊಲೀಸರು ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.