ಸಿದ್ದಾಪುರ: ‘ಈ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮಾಡುವುದು ಇಲ್ಲಿನ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಜವಾಬ್ದಾರಿ. ಯಾಕೆಂದರೆ ಜನ ಅವರನ್ನು ಆರು ಬಾರಿ ಗೆಲ್ಲಿಸಿದ್ದಾರೆ. ಇಲ್ಲಿನ ರಸ್ತೆಗಳು ಕೆಟ್ಟದಾಗಿದ್ದರೆ ಅದಕ್ಕೆ ಕಾಗೇರಿ ಜವಾಬ್ದಾರರಾಗಬೇಕು. ಅದರಲ್ಲಿಯೂ ಈಗ ಬಿಜೆಪಿ ಸರ್ಕಾರವೇ ಇದೆಯಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ತಾಲ್ಲೂಕಿನ ವ್ಯಾಪ್ತಿಯ ಜೋಗದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಗೇರಿ ಒಂದೂ ದಿನವೂ ನಮ್ಮಲ್ಲಿ ರಸ್ತೆಗಳು ಕೆಟ್ಟಿವೆ ಎಂದು (ನಮ್ಮ ಸರ್ಕಾರವಿದ್ದಾಗ) ಸದನದಲ್ಲಿ ಪ್ರಶ್ನೆ ಎತ್ತಿಲ್ಲ. ನನ್ನ ಬಳಿಯೂ ಕೇಳಿಲ್ಲ, ಕೇಳಿದರೆ ನಾನು ಕೊಡುತ್ತಿದ್ದೆ. ಇಡೀ ರಾಜ್ಯದಲ್ಲಿ ರಸ್ತೆಗೆ ಅನುದಾನ ಕೊಟ್ಟಿದ್ದೆವಲ್ಲ. ಶಿಕಾರಿಪುರಕ್ಕೆ, ಯಡಿಯೂರಪ್ಪನವರಿಗೆ ಕೊಟ್ಟಿಲ್ಲವೇ? ಇಲ್ಲಿನ ಸಂಸದರು ಕೂಡ ಬಿಜೆಪಿಯವರಲ್ಲವಾ, ಅವರು ಕೇಂದ್ರ ರಸ್ತೆ ನಿಧಿ ಯಾಕೆ ತಂದಿಲ್ಲ? ಸಂಸದರು ಎಂದರೆ ಬರಿ ಬೆಂಕಿ ಹಚ್ಚುವ ಕೆಲಸ ಮಾಡಬೇಕಾ’ ಎಂದು ಖಾರವಾಗಿ ಪ್ರಶ್ನಿಸಿದರು.
‘ಆಡಳಿತವನ್ನು ಗಮನದಲ್ಲಿಟ್ಟು ಹೊಸ ಜಿಲ್ಲೆ ರಚನೆ ಮಾಡಬೇಕಾಗುತ್ತದೆ. ಜನರಿಗೆ ತೊಂದರೆ ಕಡಿಮೆ ಮಾಡಲು ಶಿರಸಿ ಜಿಲ್ಲೆ ಮಾಡಬಹುದು’ ಎಂದು ಶಿರಸಿ ಜಿಲ್ಲೆ ರಚನೆಯ ಪ್ರಶ್ನೆಗೆ ಅವರು ಉತ್ತರಿಸಿದರು.
‘ನಮ್ಮ ಪಕ್ಷದ ಕಾರ್ಯಕರ್ತರೂ ಕೂಡ ಪಕ್ಷದ ಸಾಧನೆಯ ಬಗ್ಗೆ ಜನರಿಗೆ ಹೇಳುವ ಕೆಲಸ ಮಾಡಿದ್ದಾರೆ. ಆದರೆ ನಮ್ಮ ಕಾರ್ಯಕರ್ತರಿಗೆ ಆರ್ಎಸ್ಎಸ್ನವರಂತೆ ಸುಳ್ಳು ಹೇಳಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಪಕ್ಷದ ಸಂಘಟನ ಹಾಗೂ ಕಾರ್ಯಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಮುಖಂಡ ಕೆ.ಜಿ.ನಾಗರಾಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.