ADVERTISEMENT

ಕಾರವಾರ: ಕಾಳಿ ನದಿಗೆ ಉಕ್ಕಿನ ಹೊಸ ಸೇತುವೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 4:54 IST
Last Updated 3 ಸೆಪ್ಟೆಂಬರ್ 2025, 4:54 IST
   

ಕಾರವಾರ: ಕಳೆದ ವರ್ಷ ಕುಸಿದು ಬಿದ್ದಿದ್ದ ಕಾಳಿ ನದಿಯ ಹಳೆಯ ಸೇತುವೆ ಇದ್ದ ಜಾಗದಲ್ಲಿ ಹೊಸದಾಗಿ ಉಕ್ಕಿನ ಕಮಾನಿನ ಸೇತುವೆ ನಿರ್ಮಿಸಲು ನಿರ್ಧರಿಸಲಾಗಿದ್ದು, ಮಳೆಗಾಲ ಮುಗಿಯುವುದರೊಳಗೆ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳುವ ಕೆಲಸ ಆರಂಭಗೊಂಡಿದೆ.

ಹಳೆಯ ಸೇತುವೆ ಕುಸಿದು ಬಿದ್ದ ಸ್ಥಳದ ಸಮೀಪದಲ್ಲೇ ಕಬ್ಬಿಣದ ಸರಳುಗಳು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ರಾಶಿ ಹಾಕಲಾಗಿದೆ. ದಾಸ್ತಾನಿನ ಸುತ್ತ, ಹೆದ್ದಾರಿಯ ಬದಿಯಲ್ಲಿ ಸುರಕ್ಷತೆ ದೃಷ್ಟಿಯಿಂದ ಶೀಟುಗಳನ್ನು ಜೋಡಿಸಿ ತಾತ್ಕಾಲಿಕ ಗೋಡೆ ನಿರ್ಮಿಸಿಕೊಳ್ಳಲಾಗಿದೆ.

‘665 ಮೀಟರ್ ಉದ್ದದ ಸೇತುವೆ ನಿರ್ಮಿಸಬೇಕಿದ್ದು, ಉಕ್ಕಿನ ಕಮಾನಿನ ಮಾದರಿಯ ಸೇತುವೆ ನಿರ್ಮಾಣಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿ–66ರ ನಿರ್ಮಾಣ, ನಿರ್ವಹಣೆ ನಡೆಸುತ್ತಿರುವ ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯೇ ಹೊಸ ಸೇತುವೆ ನಿರ್ಮಿಸಲಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ತಿಳಿಸಿದ್ದಾರೆ.

ADVERTISEMENT

‘ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ರಲ್ಲಿ 2042ರ ವರೆಗೂ ನಿರ್ವಹಣೆಯ ಜವಾಬ್ದಾರಿ ಕಂಪನಿಗೆ ಇದೆ. ನಿರ್ಮಿಸಿ, ನಿರ್ವಹಿಸಿ, ಹಸ್ತಾಂತರಿಸುವ ಒಪ್ಪಂದದಡಿ ಈ ಯೋಜನೆ ನಡೆಯುತ್ತಿರುವುದರಿಂದ ಸೇತುವೆ ನಿರ್ಮಾಣ, ನಿರ್ವಹಣೆಯನ್ನು ಅವರೇ ನಿಭಾಯಿಸಲಿದ್ದಾರೆ’ ಎಂದರು.

‘ಸೇತುವೆ ನಿರ್ಮಾಣಕ್ಕೆ ಭದ್ರವಾದ ನೆಲಗಟ್ಟು ಅಗತ್ಯವಿದೆ. ಎಷ್ಟು ಆಳದವರೆಗೆ ಸೇತುವೆಯ ಕಂಬಗಳನ್ನು ನಿರ್ಮಿಸಬೇಕು ಎಂಬುದರ ಖಚಿತತೆಗೆ ಮಳೆಗಾಲ ಮುಗಿದ ತಕ್ಷಣ ಪೈಲಿಂಗ್ ಪರೀಕ್ಷೆ ನಡೆಯುತ್ತದೆ’ ಎಂದು ವಿವರಿಸಿದರು.

ಕಾಳಿ ನದಿಗೆ ಹೊಸ ಸೇತುವೆ ನಿರ್ಮಾಣಕ್ಕೆ ಪ್ರಾಥಮಿಕ ಹಂತದ ಅಗತ್ಯ ಪ್ರಕ್ರಿಯೆಗಳು ಸದ್ಯದಲ್ಲೇ ಆರಂಭಗೊಳ್ಳಲಿವೆಕೆ.
ಶಿವಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ

‘ಹೊಸ ಸೇತುವೆ ನಿರ್ಮಾಣಕ್ಕೆ ಸದ್ಯದ ಪ್ರಕಾರ ₹120 ಕೋಟಿ ವೆಚ್ಚ ತಗಲುವ ಅಂದಾಜಿದೆ. ಮಳೆಗಾಲ ಮುಗಿಯುವುದರೊಳಗೆ ನಿರ್ಮಾಣಕ್ಕೆ ಪ್ರಾಥಮಿಕ ಹಂತದಲ್ಲಿ ಬೇಕಿರುವ ಸಾಮಗ್ರಿಗಳನ್ನು ಸಿದ್ಧವಿಟ್ಟುಕೊಳ್ಳಲಾಗುತ್ತಿದೆ. ಮಳೆ ಕಡಿಮೆ ಆಗುತ್ತಿದ್ದಂತೆಯೇ ಕೆಲಸ ಪ್ರಾರಂಭಿಸಲಿದ್ದೇವೆ’ ಎಂದು ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯ ಮುಖ್ಯ ವ್ಯವಸ್ಥಾಪಕ ಮೋಹನದಾಸ್ ಪ್ರತಿಕ್ರಿಯಿಸಿದ್ದಾರೆ. ‘ಸೇತುವೆಯ ಅವಶೇಷಗಳನ್ನು ನಿರೀಕ್ಷಿತ ಅವಧಿಗೆ ಮೊದಲೇ ತೆರವುಗೊಳಿಸಲಾಯಿತು. ಮುಂದಿನ ಎರಡೂವರೆ ವರ್ಷದೊಳಗೆ ಸೇತುವೆ ನಿರ್ಮಿಸುವ ಗುರಿಯನ್ನೂ ಹೊಂದಿದ್ದೇವೆ’ ಎಂದರು.

‘ಹೊಸ ಅಡಿಪಾಯದ ಮೇಲೆ ಕಾಮಗಾರಿ’

ಕಾಳಿ ನದಿಯ ಹಳೆಯ ಸೇತುವೆ ಇದ್ದ ಜಾಗದಲ್ಲಿ ಸಾಲು ಸಾಲಾಗಿ 8ಕ್ಕೂ ಹೆಚ್ಚು ಅಡಿಪಾಯ ಕಂಬಗಳಿವೆ. ಅವುಗಳನ್ನೇ ಬಳಕೆ ಮಾಡಿ ಹೊಸ ಸೇತುವೆ ನಿರ್ಮಾಣ ಆಗಬಹುದು ಎಂಬ ಆತಂಕದ ಚರ್ಚೆ ಸಾರ್ವಜನಿಕ ವಲಯದಲ್ಲಿದೆ.

‘ಸೇತುವೆ ನಿರ್ಮಾಣಕ್ಕೆ ಈಗಿರುವ ಯಾವುದೇ ಅಡಿಪಾಯದ ಕಂಬಗಳನ್ನು ಬಳಕೆ ಮಾಡುವುದಿಲ್ಲ. ಹೊಸದಾಗಿ ಪೈಲಿಂಗ್ ಪರೀಕ್ಷೆ ನಡೆಸಿ, ಭದ್ರ ಅಡಿಪಾಯದೊಂದಿಗೆ, ಗಟ್ಟಿಮುಟ್ಟಾದ ಕಂಬಗಳನ್ನು ನಿರ್ಮಿಸಲಾಗುತ್ತದೆ. ಅದರ ಮೇಲೆ ಸೇತುವೆ ನಿರ್ಮಾಣ ಆಗಲಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.