ಕಾರವಾರ: ತಾಲ್ಲೂಕಿನ ಕದ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಕೊರಳಿಗೆ ರೇಡಿಯಂ ಪಟ್ಟಿ ಕಟ್ಟುವ ಕಾರ್ಯ ನಡೆದಿದೆ.
ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿ–34ರಲ್ಲಿ ವ್ಯಾಪಕ ಪ್ರಮಾಣದಲ್ಲಿ ಬೀಡಾಡಿ ದನಗಳು ಬೀಡುಬಿಡುತ್ತಿದ್ದು, ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಕದ್ರಾ ಠಾಣೆಯ ಸಿಬ್ಬಂದಿ ಬೀಡಾಡಿ ದನಗಳ ಕೊರಳಿಗೆ ರಾತ್ರಿ ವೇಳೆ ಹೊಳೆಯುವ ರೇಡಿಯಂ ಪಟ್ಟಿಗಳನ್ನು ಕಟ್ಟುವ ಕೆಲಸ ನಡೆಸಿದರು.
ಸಬ್ ಇನ್ಸ್ಪೆಕ್ಟರ್ ಸುನೀಲ ಬಂಡಿವಡ್ಡರ್ ನೇತೃತ್ವದಲ್ಲಿ ಸಿಬ್ಬಂದಿ ಸಾರ್ವಜನಿಕರ ನೆರವು ಪಡೆದು ರಾಜ್ಯ ಹೆದ್ದಾರಿಗಳಲ್ಲಿ ಅಲೆದಾಡುವ ಬೀಡಾಡಿ ದನಗಳ ಕೊರಳಿಗೆ ಪಟ್ಟಿ ಕಟ್ಟಿದರು.
‘ಕಾರವಾರದಿಂದ ಜೊಯಿಡಾ, ದಾಂಡೇಲಿ ಭಾಗಕ್ಕೆ ರಾತ್ರಿ ವೇಳೆಯೂ ವಾಹನಗಳ ಓಡಾಟ ಹೆಚ್ಚಿದೆ. ಈ ರಸ್ತೆಯಲ್ಲಿ ಬೀಡಾಡಿ ದನಗಳು ರಸ್ತೆಯ ಮೇಲೆ ಗುಂಪು ಗುಂಪಾಗಿ ನಿಲ್ಲುತ್ತಿರುವ ದೂರುಗಳಿದ್ದವು. ಅವುಗಳಿಂದ ಅಪಘಾತ ಉಂಟಾಗದಂತೆ, ಬೀಡಾಡಿ ದಿನಗಳಿಗೂ ಅಪಾಯ ಉಂಟಾಗದಂತೆ ಮುನ್ನೆಚ್ಚರಿಕೆಯಾಗಿ ಪಟ್ಟಿ ಕಟ್ಟಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.