
ಸಿದ್ದಾಪುರ: ಕೇವಲ ಹೋರಾಟದ ಕಿಚ್ಚು ಹಚ್ಚುವುದು ಮುಖ್ಯವಲ್ಲ. ಅದು ಗುರಿ ತಲುಪುವವರೆಗೆ ಆರದಂತೆ ನೋಡಿಕೊಳ್ಳುವುದು ಅತಿ ಮುಖ್ಯ. ಇಲ್ಲದಿದ್ದರೆ ಹೋರಾಟ ಗಂಭೀರತೆ ಕಳೆದುಕೊಳ್ಳುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್. ವಿ. ಹೆಗಡೆ ಮುತ್ತಿಗೆ ಹೇಳಿದರು.
ತಾಲ್ಲೂಕಿನ ಅಣಲೇಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿಮಕ್ಕಿಯಲ್ಲಿ ಸೋಮವಾರ ಅಘನಾಶಿನಿ - ವರದಾ ನದಿ ಜೋಡಣೆ ವಿರೋಧಿಸಿ ಹಮ್ಮಿಕೊಂಡ ಬೃಹತ್ ಸಭೆ ಮತ್ತು ಪಾದಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೋರಾಟಕ್ಕೆ ನೇತೃತ್ವ ಮತ್ತು ಭದ್ರವಾದ ಹಿನ್ನೆಲೆ ಬೇಕು. ಇಲ್ಲಿ ಯಾವುದೇ ಜಾತಿ, ಮಠ ಅಥವಾ ರಾಜಕೀಯ ಪಕ್ಷಗಳ ಭೇದವಿಲ್ಲ. ಒಟ್ಟಾಗಿ ನಿಂತಾಗ ಮಾತ್ರ ಅಘನಾಶಿನಿ ಮತ್ತು ಬೇಡ್ತಿ ಯೋಜನೆಗಳನ್ನು ತಡೆಯಲು ಸಾಧ್ಯ ಎಂದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಸಂಚಾಲಕ ಮಹಬಲೇಶ್ವರ ನಾಯ್ಕ ಬೇಡ್ಕಣಿ, ಎಮ್ ಎಲ್ ಭಟ್, ವೀಣಾ ಗೌಡ ಅಣಲೇಬೈಲ್, ಶ್ಯಾಮಲಾ ಗೌಡ ಬಿದ್ರಕಾನ, ಪದ್ಮಾವತಿ ಗೌಡ ತಂಡಾಗುಂಡಿ, ಎಸ್ ಆರ್ ಹೆಗಡೆ ಕುಂಬಾರಕುಳಿ, ಅಬ್ದುಲ್ ಶರೀಪ್ ಹೇರೂರು, ಜುಬೇರ್ ಸಾಬ, ರಾಜೇಶ್ ಭಟ್ ಮಕ್ಕಿಗದ್ದೆ, ಪರಿಸರವಾದಿ ಬಾಲಚಂದ್ರ ಹೆಗಡೆ, ರಾಜಾರಾಮ್ ನಾಯ್ಕ ಕಿರಕೋಡ, ಕೆ ಟಿ ನಾಯ್ಕ ಹೆಗ್ಗೇರಿ, ಸೀತಾರಾಮ ಗೌಡ ಹುತ್ಗಾರ, ಮಂಜುನಾಥ ಹೆಗಡೆ ಮಾತನಾಡಿದರು.
ಬಹಿರಂಗ ಸಭೆಯ ನಂತರ ಬಾಳೆಕೊಪ್ಪ ಗ್ರಾಮದ ಅಘನಾಶಿನಿ ಹರಿಯುವ ಗೇಜ್ಕಟ್ಟ ನದಿಯವರೆಗೆ ಪಾದಯಾತ್ರೆ ಸಂಘಟಿಸಲಾಗಿತ್ತು. ನಾಗಪತಿ ಗೌಡ ಹುಕ್ಕಳ್ಳಿ ಪ್ರಾಸ್ತಾವಿಕ ಮಾತನಾಡಿದರು.
ಜನ ಮತ್ತು ಪರಿಸರ ವಿರೋಧಿ ನದಿ ಜೋಡಣೆಗೆ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟ ಮಾಡಲು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.