ಶಿರಸಿ: ಬೆಟ್ಟ ಭೂಮಿಯಲ್ಲಿ ಬಹುಉಪಯೋಗಿ ಬೆಳೆ ಬೆಳೆಯುವ ಕುರಿತು ರೈತರಿಗೆ ಜಾಗೃತಿ ಮೂಡಿಸುವ ವಿಷಯವನ್ನು ಪ್ರಾಧಾನ್ಯವಾಗಿಸಿ ಮೇ 14 ರಂದು ಕೃಷಿ ಜಯಂತಿ ಆಚರಿಸಲಾಗುವುದು ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಪ್ರತಿ ವರ್ಷದಂತೆ ಎರಡು ದಿನದ ಬದಲಾಗಿ ಈ ಬಾರಿ ಒಂದೇ ದಿನ ಜಯಂತಿ ಆಚರಿಸಲಾಗುತ್ತಿದೆ. ಅಡಿಕೆ ಹೊರತಾಗಿ ಇತರ ಬೆಳೆಗಳನ್ನು ಬೆಳೆಯುವ ಬಗ್ಗೆ ರೈತರಿಗೆ ತಿಳುವಳಿಕೆ ಮೂಡಿಸುವ ಕಾರ್ಯವನ್ನೂ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದ ತಜ್ಞರಿಂದ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿದೆ’ ಎಂದರು.
‘ಕಾಲೇಜು ವಿದ್ಯಾರ್ಥಿಗಳಿಗಾಗಿ ರಸ ಪ್ರಶ್ನೆ ಹಮ್ಮಿಕೊಳ್ಳಲಾಗಿದೆ. ಬೆಳೆಗಳಿಗೆ ರೋಗ ಬಾಧೆ, ಅಸ್ಥಿರ ಬೆಲೆ, ಸಾಲಬಾಧೆ, ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವ ಕಾಲಘಟ್ಟದಲ್ಲಿ ಕೃಷಿ ಕ್ಷೇತ್ರಕ್ಕೆ ಪುನಶ್ವೇತನ ಕೊಡುವ ನಿಟ್ಟಿನಲ್ಲಿ ಕೃಷಿ ಜಯಂತಿ ಆಚರಣೆಯಾಗಲಿದೆ’ ಎಂದು ತಿಳಿಸಿದರು.
ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ಸುರೇಶ ಹಕ್ಕಿಮನೆ, ಇತರರಿದ್ದರು.
ಪ್ರಶಸ್ತಿ ಪ್ರದಾನ:
ಮೇ 14 ರಂದು ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಿದ್ದಾಪುರ ತಾಲ್ಲೂಕಿನ ಬಾಳೆಕೊಪ್ಪದ ಸುಬ್ರಾಯ ಗಣಪತಿ ಹೆಗಡೆ ಅವರಿಗೆ ಕೃಷಿ ಕಂಠೀರವ ಪ್ರಶಸ್ತಿ, ಶಿರಸಿ ತಾಲ್ಲೂಕು ಕ್ಯಾದಗಿಮನೆಯ ನೇತ್ರಾವತಿ ವೆಂಕಟ್ರಮಣ ಹೆಗಡೆಗೆ ಕೃಷಿ ಸಾಧಕ ಮಹಿಳೆ ಪ್ರಶಸ್ತಿ, ಯಲ್ಲಾಪುರ ತಾಲ್ಲೂಕು ಬಾಳೆಹದ್ದದ ಶಾಂತಾರಾಮ ಸುಬ್ರಾಯ ಹೆಗಡೆ ಕುಟುಂಬಕ್ಕೆ ಉತ್ತಮ ಅವಿಭಕ್ತ ಕೃಷಿ ಕುಟುಂಬ ಪ್ರಶಸ್ತಿ, ಸಿದ್ದಾಪುರ ತಾಲ್ಲೂಕು ಮನೇನಳ್ಳಿಯ ಮಾಬ್ಲು ಬಂಗಾರ್ಯ ಗೌಡಗೆ ಸಾಧಕ ಕೃಷಿ ಕುಶಲಕರ್ಮಿ ಪ್ರಶಸ್ತಿ, ಬೊಮ್ಮನಳ್ಳಿ ಸಮೀಪದ ಗಲಗದಮನೆಯ ಗುರುನಾಥ ಗಣಪತಿ ಹೆಗಡೆಗೆ ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿಪ್ರದಾನ ಮಾಡಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.