ADVERTISEMENT

‘ಅನುಸೂಚಿತ ಬುಡಕಟ್ಟು ಪಂಗಡ’ಕ್ಕೆ ಸೇರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 13:52 IST
Last Updated 21 ಸೆಪ್ಟೆಂಬರ್ 2022, 13:52 IST
ಕುಣಬಿ ಸಮುದಾಯವನ್ನು ಅನುಸೂಚಿತ ಬುಡಕಟ್ಟು ಪಂಗಡದ ಪಟ್ಟಿಗೆ ಸೇರ್ಪಡೆ ಮಾಡುವಂತೆ ಜೊಯಿಡಾ ತಾಲ್ಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘದ ಪ್ರಮುಖರು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು
ಕುಣಬಿ ಸಮುದಾಯವನ್ನು ಅನುಸೂಚಿತ ಬುಡಕಟ್ಟು ಪಂಗಡದ ಪಟ್ಟಿಗೆ ಸೇರ್ಪಡೆ ಮಾಡುವಂತೆ ಜೊಯಿಡಾ ತಾಲ್ಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘದ ಪ್ರಮುಖರು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು   

ಕಾರವಾರ: ‘ಕುಣಬಿ ಸಮುದಾಯವು33 ವರ್ಷಗಳಿಂದ ಮನವಿ ಮಾಡುತ್ತಿದ್ದರೂ ‘ಅನುಸೂಚಿತ ಬುಡಕಟ್ಟು ಪಂಗಡ’ ಪಟ್ಟಿಗೆ ಸೇರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗಿಲ್ಲ. ಇನ್ನಾದರೂ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯ ಕುಣಬಿ ಸಮುದಾಯದಿಂದ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಜೊಯಿಡಾ ತಾಲ್ಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಅಜಿತ್ ಮಿರಾಶಿ ಹೇಳಿದ್ದಾರೆ.

ಈ ಸಂಬಂಧ ಸಮುದಾಯದ ಪ್ರಮುಖರು, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಣಬಿ ಸಮುದಾಯದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಾಗಿ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ನೆರೆಯ ಗೋವಾ ರಾಜ್ಯದಲ್ಲಿ 2007ರಲ್ಲೇ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಅನ್ಯಾಯ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮೈಸೂರು ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ಕೇಂದ್ರದ ಕುಲಶಾಸ್ತ್ರೀಯ ಅಧ್ಯಯನ ವರದಿಯು 2017ರ ಅ.10ರಂದು ಶಿಫಾರಸು ಮಾಡಿದೆ. 2019ರ ಫೆ.21ರಂದು ಕೇಂದ್ರ ಸರ್ಕಾರದ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಕಚೇರಿಗೆ ಸಮರ್ಥನಾ ವರದಿಯನ್ನು ಕಳುಹಿಸಲಾಗಿದೆ. ಆದರೂ ಈ ತನಕ ಯಾವುದೇ ಕ್ರಮಗಳಾಗಿಲ್ಲ’ ಎಂದು ಬೇಸರಿಸಿದರು.

ADVERTISEMENT

ಪ್ರಮುಖರಾದ ವಿಷ್ಣು, ಪ್ರಸನ್ನ, ಸುರೇಶ ವೇಳಿಪ, ಚಂದ್ರಶೇಖರ್ ಸಾವರ್ಕರ್, ದೇವಿದಾಸ ವೇಳಿಪ, ಮಹಾಂತೇಶ ಗಾವಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.