ಹಳಿಯಾಳ: ಇಲ್ಲಿ ನಡೆಯಲಿರುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮುಕ್ತ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ಕುಸ್ತಿ ಸ್ಪರ್ಧೆಗೆ ಭರದಿಂದ ಸಿದ್ಧತೆ ನಡೆದಿದೆ.
ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಕುಸ್ತಿ ಅಸೋಸಿಯೇಷನ್ ಆಶ್ರಯದಲ್ಲಿ ಜ.25 ರಿಂದ 27ರವರೆಗೆ ನಡೆಯಲಿರುವ ಕುಸ್ತಿ ಪಂದ್ಯದಲ್ಲಿ 600ಕ್ಕೂ ಹೆಚ್ಚು ಕುಸ್ತಿ ಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. 150ಕ್ಕೂ ಮಿಕ್ಕಿ ಬಾಲಕಿಯರು ಭಾಗವಹಿಸಲಿದ್ದಾರೆ ಎಂದು ಸಂಚಾಲಕ ಯಶವಂತ ಸ್ವಾಮೀಜಿ ತಿಳಿಸಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಅಲ್ಲಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಅಂತರರಾಷ್ಟ್ರೀಯ ನಿಯಮಾವಳಿಯಂತೆ ಕುಸ್ತಿ ನಡೆಯಲಿದೆ. ವಿವಿಧ ಕ್ರೀಡಾ ಶಾಲೆಯ 35ಕ್ಕೂ ಹೆಚ್ಚು ನಿರ್ಣಾಯಕರು ಭಾಗವಹಿಸುವರು ಎಂದು ಹೇಳಿದರು.
ದೆಹಲಿ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಕುಸ್ತಿ ಪಂದ್ಯಕ್ಕೆ ಪೈಲ್ವಾನರು ಬರಲಿದ್ದಾರೆ. ಪ್ರಶಸ್ತಿಯ ಟೈಟಲ್ ಕುಸ್ತಿಗಳನ್ನು ಮಣ್ಣಿನ ಅಖಾಡದ ಮೇಲೆ ಸೋಲು ಗೆಲುವಿನ ತನಕ, ಕುಸ್ತಿ ನಿಯಮಾವಳಿಯಂತೆ ಆಡಿಸಲಾಗುವುದು. ಆಹ್ವಾನಿತ ಪಂದ್ಯಗಳನ್ನು ಅಂತರರಾಷ್ಟ್ರೀಯ ಕುಸ್ತಿ ಪಟುಗಳಾದ ಇರಾನ್ ದೇಶದ ಹಾಗೂ ಭಾರತದಲ್ಲಿ ಪ್ರಸಿದ್ಧಿ ಪಡೆದ ಪೈಲ್ವಾನರೊಂದಿಗೆ ಆಡಿಸಲಾಗುವುದು. 29 ಕೆ.ಜಿ.ಯಿಂದ 75 ಕೆ.ಜಿ ಮೇಲ್ಪಟ್ಟು ಕುಸ್ತಿ ಪಟುಗಳ ಪಂದ್ಯಾವಳಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.