ADVERTISEMENT

‘ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸಿ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 3:47 IST
Last Updated 3 ಜನವರಿ 2021, 3:47 IST
ಅಂಕೋಲಾದಲ್ಲಿ ನಡೆದ ಕುವೆಂಪು ಜನ್ಮದಿನದ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು
ಅಂಕೋಲಾದಲ್ಲಿ ನಡೆದ ಕುವೆಂಪು ಜನ್ಮದಿನದ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು   

ಅಂಕೋಲಾ: ಯುಗದ ಕವಿ ಕುವೆಂಪು ಅವರ ಬರಹ ಹಾಗೂ ಜೀವನದ ಕುರಿತು ಓದಬೇಕು. ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಓದಿನ ಅಭಿರುಚಿ ಬೆಳೆಸುವ ಕೆಲಸವನ್ನು ಅಧ್ಯಾಪಕರು ಮಾಡಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ. ರಾಮಕೃಷ್ಣ ಗುಂದಿ ಸಲಹೆ ನೀಡಿದ್ದಾರೆ.

ಅವರು ಇತ್ತೀಚಿಗೆ ಸಂಗಾತಿ ರಂಗಭೂಮಿ (ರಿ) ಅಂಕೋಲಾ ಅವರ ಆಶ್ರಯದಲ್ಲಿ ಜೈಹಿಂದ್ ಮೈದಾನದಲ್ಲಿ ‘ನೆಲದನಿ ಸಸ್ಯಸಂತೆ’ಯಲ್ಲಿ ಆಯೋಜಿಸಿದ್ದ ಕುವೆಂಪು ಜನ್ಮದಿನದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಅನನ್ಯವಾದುದ್ದನ್ನು ಬರೆದ ಜಗದ ಕವಿ ಕುವೆಂಪು. ಅವರು ವಿಶ್ವಮಾನವತೆಯ ಸಂದೇಶವನ್ನು ಸಾರಿದವರು. ಅವರ ಬರಹಗಳನ್ನು ಇಂದಿನ ಯುವಜನತೆ ಓದಿ ಸ್ಫೂರ್ತಿ ಪಡೆಯಬೇಕು. ಜಡವಾದ ಸಮಾಜವನ್ನು ಮತ್ತೆ ಎದ್ದು ನಿಲ್ಲಿಸಬೇಕಾಗಿದೆ. ಇದು ಶಿಕ್ಷಣ ಸಂಸ್ಥೆ ಹಾಗೂ ಅಧ್ಯಾಪಕರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.

ADVERTISEMENT

ಮುಖ್ಯ ಅತಿಥಿ ಲೇಖಕ ಮಹಾಂತೇಶ ರೇವಡಿ ಅವರು ಮಾತನಾಡಿ, ಈ ಭಾಗದ ಎಲ್ಲ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳು ಸ್ತಬ್ಧವಾಗಿರುವಾಗ ಸಂಗಾತಿ ರಂಗಭೂಮಿ ತಂಡದವರು ಕುವೆಂಪು ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಈ ನೆಲದಲ್ಲಿ ಸಾಹಿತ್ಯ, ನೆಲೆ ಮತ್ತು ಸೆಲೆ ಬತ್ತಿಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ ಎಂದರು.

ಸಂಗಾತಿ ರಂಗಭೂಮಿ ಕಾರ್ಯಾಧ್ಯಕ್ಷ ಕೆ. ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಉದಯಕುಮಾರ ನಾಯ್ಕ ಕೇಣಿ, ಸಂತೋಷ ಗೌಡ, ಸುಭಾಷ ನಾಯಕ ಭಾವಿಕೇರಿ, ವಿನಾಯಕ ಶೆಟ್ಟಿ, ವಿದ್ಯಾ ಆಚಾರಿ, ಸಾಹಿತಿ ಆನಂದ ಮಹಾಲೆ, ಅಧ್ಯಾಪಕ ಬಾಲಚಂದ್ರ ದೊಡ್ಮನಿ ಇದ್ದರು. ತಿಮ್ಮಣ್ಣ ಭಟ್ಟ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.