ADVERTISEMENT

ದುರುಪಯೋಗ ತಡೆಗೆ ಹೊಸ ವೆಬ್‌ಸೈಟ್: ಶಿವರಾಮ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 13:21 IST
Last Updated 24 ನವೆಂಬರ್ 2020, 13:21 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಕಾರವಾರ: ‘ಕಾರ್ಮಿಕ ಇಲಾಖೆಯ ಸೌಲಭ್ಯಗಳ ದುರುಪಯೋಗ ತಡೆಯಲು ರಾಜ್ಯದಲ್ಲಿ ಪ್ರತ್ಯೇಕ ವೆಬ್‌ಸೈಟ್ ರೂಪಿಸಲಾಗುತ್ತಿದೆ. ಅದು ಎರಡೂವರೆ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾರ್ಮಿಕ ಇಲಾಖೆಯಲ್ಲಿ ಸೌಲಭ್ಯದ ದುರುಪಯೋಗದ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ಹಾವೇರಿ ಜಿಲ್ಲೆಯಲ್ಲಿ ಒಂದೇ ತಿಂಗಳ ಅವಧಿಯಲ್ಲಿ 31 ಸಾವಿರ ಕಾರ್ಮಿಕರ ಹೆಸರು ನೋಂದಣಿಯಾಗಿದೆ. ಇದೇ ರೀತಿ ಏಳು ಜಿಲ್ಲೆಗಳಲ್ಲಿ ಆಗಿದೆ. ಒಂದು ತಂಡವು ಈ ರೀತಿ ಬೋಗಸ್ ಗುರುತಿನ ಚೀಟಿಗಳನ್ನು ಸೃಷ್ಟಿಸುತ್ತಿದೆ’ ಎಂದು ತಿಳಿಸಿದರು.

‘ಈ ಕಾರಣದಿಂದಾಗಿ ಹೊಸ ಗುರುತಿನ ಚೀಟಿಗಳ ವಿತರಣೆಯನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ. ಎರಡು ಮೂರು ದಿನಗಳಲ್ಲಿ ಷರತ್ತುಬದ್ಧವಾಗಿ ವಿತರಣೆ ಶುರು ಮಾಡಲಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಎಲ್ಲ ಯೋಜನೆಗಳ ಮಾಹಿತಿಗಳು ಈವರೆಗೆ ‘ಸೇವಾಸಿಂಧು’ ವೆಬ್‌ಸೈಟ್ ಮೂಲಕ ಮಾತ್ರ ಸಿಗುತ್ತಿತ್ತು. ಇದರಿಂದ ಗೊಂದಲವಾಗುತ್ತಿತ್ತು. ಹಾಗಾಗಿ ಕಾರ್ಮಿಕ ಇಲಾಖೆಗೆ ಮತ್ತು ಜೊತೆಗಿರುವ ಇತರ ವಿಭಾಗಗಳನ್ನು ಒಳಗೊಳ್ಳುವಂತೆ ಮತ್ತೊಂದು ವೆಬ್‌ಸೈಟ್‌ ಆರಂಭಿಸಲಾಗುತ್ತದೆ’ ಎಂದರು.

45 ದಿನ ಗಡುವು:

ಕಾರ್ಮಿಕರ ಗುರುತಿನ ಚೀಟಿಗೆ ಅಟಲ್‌ಜೀ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ 45 ದಿನಗಳ ಒಳಗೆ ಮಾಹಿತಿಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು. ಅದನ್ನು ಕಾರ್ಮಿಕ ಇಲಾಖೆ ಅಧಿಕಾರಿ ಪರಿಶೀಲಿಸಿ ಸಹಿ ಮಾಡಿ ಒಪ್ಪಿಗೆ ನೀಡಬೇಕು. ಒಂದುವೇಳೆ, 45 ದಿನಗಳ ಬಳಿಕವೂ ಸಹಿ ಮಾಡದಿದ್ದರೆ ಅದು ಸ್ವಯಂಚಾಲಿತವಾಗಿ ಅಪ್‌ಲೋಡ್ ಆಗುತ್ತದೆ’ ಎಂದು ಹೇಳಿದರು.

‘ಅಸಂಘಟಿತ ಕಾರ್ಮಿಕರ 42 ವಿಭಾಗಗಳ ಪೈಕಿ 13 ಅನ್ನು ಮಾತ್ರಸರ್ಕಾರ ಅಧಿಕೃತವೆಂದು ಗುರುತಿಸಿದೆ. ಉಳಿದವನ್ನೂ ಇಲಾಖೆಯಡಿ ತರಲು ಸಿದ್ಧತೆ ನಡೆದಿದೆ’ ಎಂದು ಇದೇವೇಳೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.