ಕಾರವಾರ: ‘ಸ್ವಭಾಷಾ ಚಾತುರ್ಮಾಸ್ಯದ ಸವಿನೆನಪಾಗಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸ್ವಭಾಷಾ ಪೀಠ ಮತ್ತು ಹವ್ಯಕ ಅಧ್ಯಯನ ಪೀಠ ಆರಂಭಿಸಲಾಗುವುದು’ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಘೋಷಿಸಿದರು.
ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿರುವ ಸ್ವಭಾಷಾ ಚಾತುರ್ಮಾಸ್ಯದ 53ನೇ ದಿನವಾದ ಭಾನುವಾರ ಹಮ್ಮಿಕೊಂಡಿದ್ದ ಹವಿಗನ್ನಡ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಕನ್ನಡದ ಕವಿರಾಜ ಮಾರ್ಗದ ರೀತಿಯಲ್ಲಿ ಹವ್ಯಕ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗುರುರಾಜಮಾರ್ಗ ಅನುಷ್ಠಾನಕ್ಕೆ ಬರಲಿದೆ. ಚಾತುರ್ಮಾಸ್ಯದ ಬಳಿಕವೂ ಸ್ವಭಾಷಾ ಅಭಿಯಾನ ಮುಂದುವರಿಯಲಿದೆ. ತಮ್ಮತನವನ್ನು ಬಡಿದೆಬ್ಬಿಸುವ ಕಾರ್ಯ ನಿರಂತರವಾಗಿರಲಿದೆ’ ಎಂದರು.
‘ವಿನಾಶದ ಅಂಚಿನಲ್ಲಿರುವ ನಮ್ಮ ಭಾಷೆಯನ್ನು ಉಳಿಸುವ ಪ್ರಯತ್ನ ನಡೆಯಬೇಕು. ಹವ್ಯಕರು ತಮ್ಮ ಭಾಷೆಯಲ್ಲೇ ಮಾತನಾಡಿದರೆ ಭಾಷೆ ಉಳಿಯುತ್ತದೆ. ಮಠ ಇರುವುದೇ ನಮ್ಮತನದ ಕರ್ತವ್ಯ ಪ್ರಜ್ಞೆಯನ್ನು ನೆನಪಿಸುವ ಸಲುವಾಗಿ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಪಾದೇಕಲ್ಲು ವಿಷ್ಣು ಭಟ್ಟ, ‘ಹವ್ಯಕ ಭಾಷೆಯಲ್ಲೂ ವೈವಿಧ್ಯಮಯ ರೂಪಗಳಿವೆ. ಇವೆಲ್ಲವನ್ನು ಒಟ್ಟುಗೂಡಿಸಿ ಸಮಗ್ರವಾಗಿ ದಾಖಲಿಸುವ ಕಾರ್ಯ ಆಗಬೇಕು’ ಎಂದರು.
ಹವ್ಯಕರ ವಲಸೆಯಿಂದಾಗಿ ಹವಿಗನ್ನಡದ ಎದುರಿಸುತ್ತಿರುವ ಸವಾಲುಗಳು ವಿಷಯದ ಕುರಿತು ಗಾಯತ್ರಿ ರಾಘವೇಂದ್ರ, ಅಳಿಯುತ್ತಿರುವ ಹವಿಗನ್ನಡ ಪದಗಳು ವಿಷಯದ ಕುರಿತು ಲಕ್ಷ್ಮಿ ತಳಂಜೇರಿ ಮಾತನಾಡಿದರು. ಬಂದಗದ್ದೆ ರಾಧಾಕೃಷ್ಣ ಅವರು ಹವಿಗನ್ನಡ ಉಳಿಸುವುದೆಂತು ಎಂಬ ವಿಚಾರದಲ್ಲಿ ಪ್ರಬಂಧ ಮಂಡಿಸಿದರು.
ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಜಿ.ಎಲ್.ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಉದಯಶಂಕರ ನೀರ್ಪಾಜೆ, ರಮೇಶ್ ಭಟ್ ಸರವು, ಟಿ.ಜೆ.ಪ್ರಸನ್ನ ಕುಮಾರ್, ಜಿ.ಕೆ.ಹೆಗಡೆ, ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಪಂಡಿತ್, ರಾಘವೇಂದ್ರ, ವಿಷ್ಣು ಬನಾರಿ, ಎಂ.ಎನ್.ಮಹೇಶ ಭಟ್ಟ ಪಾಲ್ಗೊಂಡಿದ್ದರು.
ಹವ್ಯಕ ಕನ್ನಡದ ಜತೆಗೆ ಮುಂದಿನ ದಿನಗಳಲ್ಲಿ ಎಲ್ಲ ಭಾರತೀಯ ಭಾಷೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪೀಠ ಕಾರ್ಯ ನಿರ್ವಹಿಸಲಿದೆರಾಘವೇಶ್ವರ ಭಾರತೀ ಸ್ವಾಮೀಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.