ದಾಂಡೇಲಿ: ‘ವಿದ್ಯುತ್ ಇಲಾಖೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಿಬ್ಬಂದಿ ದಕ್ಷತೆಯಿಂದಾಗಿ ಗ್ರಾಹಕರ ದೂರುಗಳು ಈಚೆಗೆ ಕಡಿಮೆಯಾಗಿವೆ’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
ಶನಿವಾರ ನಡೆದ ದಾಂಡೇಲಿ ಹೆಸ್ಕಾಂ ವಿಭಾಗ ಕಚೇರಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹುಬ್ಬಳ್ಳಿಯ ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್., ಮಾತನಾಡಿ, ‘ಹೆಸ್ಕಾಂ ಇಲಾಖೆಯ ಎಲ್ಲ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಗುಣಮಟ್ಟದ ಕಾರ್ಯದಿಂದಾಗಿ ವ್ಯತ್ಯಯವಿಲ್ಲದ ವಿದ್ಯುತ್ ಸರಬರಾಜು ಒದಗಿಸುವಲ್ಲಿ ಸದಾ ಕಾರ್ಯ ನಿರ್ವಹಿಸುತ್ತಿರುವುದು ಮೆಚ್ಚುವಂತದ್ದಾಗಿದೆ’ ಎಂದರು.
ಹುಬ್ಬಳಿಯ ವಿದ್ಯುತ್ ಸರಬರಾಜು ಕಂಪನಿಯ ಚುನಾಯಿತ ಅಧ್ಯಕ್ಷರ ಸೈಯ್ಯದ್ ಅಂಜಿಮ ಪೀರ ಎಸ್.ಖಾದ್ರಿ ಮಾತನಾಡಿ, ‘ದಾಂಡೇಲಿಯ ಹೆಸ್ಕಾಂ ವಿಭಾಗೀಯ ಕಚೇರಿಯು ₹7.50ಕೋಟಿ ವೆಚ್ಚದಲ್ಲಿ ಸುಸುಜ್ಜಿತವಾಗಿ ನಿರ್ಮಾಣಗೊಂಡಿದೆ. ಮುಂಬರುವ ದಿನಗಳಲ್ಲಿ ಹೆಸ್ಕಾಂನ ಲೈನ್ಮೈನ್ಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸುವಲ್ಲಿ ಶಾಸಕರು, ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಅಶ್ಪಾಕ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೊಡೆ, ಸ್ಥಾಯಿ ಸಮಿತಿಯ ಅಧ್ಯಕ್ಷ ಸುಧಾ ರಾಮಲಿಂಗ, ಹೆಸ್ಕಾಂನ ನಿದೇರ್ಶಕ ಎಸ್.ನಾಗರಾಜ, ಶಿರಸಿ ವೃತ್ತದ ಹೆಸ್ಕಾಂನ ಅಧೀಕ್ಷಕ ಎಂಜಿನಿಯರ್ ದೀಪಕ ಬಾಬು ಕಾಮತ, ಅಧೀಕ್ಷಕ ಎಂಜಿನಿಯರ್ ಪಿ. ಮಂಜುನಾಥ, ನಿರ್ದೇಶಕ ತಾಂತ್ರಿಕ ವಿಭಾಗ ಎಸ್.ಜಗದೀಶ ಸೇರಿದಂತೆ ಅನೇಕರು ಇದ್ದರು.
ದಾಂಡೇಲಿ ಹೆಸ್ಕಾಂ ಕಾರ್ಯನಿರ್ವಾಕ ಎಂಜಿನಿಯರ್ ಪುರುಷೊತ್ತಮ ಮಲ್ಯಾ ಸ್ವಾಗತಿಸಿದರು. ಎಸ್.ಜಗದೀಶ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯನಿರ್ವಾಹಕ ಎಂಜಿನಿಯರ್ ಮೆಟಾ ಗುಡ್ ನಿರೂಪಿಸಿದರು. ಕುಮಾರ ಕೆ.ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.