ಕಾರವಾರ: ಜಿಲ್ಲೆಯ 27 ಪೀಠಗಳಲ್ಲಿ ಮಾರ್ಚ್ 27ರಂದು ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. 3 ಸಾವಿರಕ್ಕೂ ಅಧಿಕ ಪ್ರಕರಣಗಳ ರಾಜಿ ಸಂಧಾನ ಮಾಡುವ ಗುರಿ ಹೊಂದಲಾಗಿದೆ ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಜಿಲ್ಲೆಯಲ್ಲಿ 16,005 ಸಿವಿಲ್ ಪ್ರಕರಣಗಳು ಹಾಗೂ 18,497 ಕ್ರಿಮಿನಲ್ ಪ್ರಕರಣಗಳು ಒಟ್ಟು 34,502 ಪ್ರಕರಣಗಳು ವಿಚಾರಣೆಗೆ ಬಾಕಿಯಿವೆ. ಅವುಗಳಲ್ಲಿ ಶೇ 20ರಷ್ಟು ಪ್ರಕರಣಗಳ ರಾಜಿ ಸಂಧಾನ ಮಾಡುವ ವಿಶ್ವಾಸವಿದೆ' ಎಂದು ಹೇಳಿದರು.
'ಚೆಕ್ ಅಮಾನ್ಯ, ಮೋಟಾರ್ ವಾಹನ ಅಪಘಾತ ಪ್ರಕರಣಗಳು, ಕಾರ್ಮಿಕರಿಗೆ ಸಂಬಂಧಿಸಿದ ವ್ಯಾಜ್ಯಗಳು, ವೈವಾಹಿಕ ವಿವಾದಗಳು, ಆಸ್ತಿ ಕಲಹ ಮುಂತಾದ ರಾಜಿ ಮಾಡಲು ಸಾಧ್ಯ ಇರುವ ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ಪರಿಗಣಿಸಲಾಗುತ್ತದೆ. ವಿವಿಧ ಯೋಜನೆಗಳಿಗೆ ಭೂ ಸ್ವಾಧೀನ ವಿಚಾರದಲ್ಲಿ ಪರಿಹಾರ ನೀಡಲು ಜಿಲ್ಲೆಗೆ ರೂ 700 ಕೋಟಿ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದೆ. ಹಾಗಾಗಿ ಅಂತಹ ದೂರುಗಳನ್ನೂ ನಿಯಮದ ಪ್ರಕಾರ ರಾಜಿಗೆ ಪರಿಶೀಲಿಸಲಾಗುತ್ತದೆ' ಎಂದು ತಿಳಿಸಿದರು.
'ವಾಹನಗಳ ವಿಮೆ ದಾವೆಗಳಲ್ಲಿ ವಾಹನ ಚಾಲನಾ ಪರವಾನಗಿ ಮತ್ತು ಚಾಲ್ತಿಯಲ್ಲಿರುವ ವಿಮಾ ಪಾಲಿಸಿ ಹೊಂದಿರುವ ವಾಹನಗಳ ಮಾಲೀಕರೊಂದಿಗೆ ಚರ್ಚಿಸಿ ಪರಿಹರಿಸಲು ವಿಮಾ ಕಂಪನಿಗಳು ಒಪ್ಪಿಕೊಂಡಿವೆ. ಜಿಲ್ಲೆಯ ಪತ್ತಿನ ಸಹಕಾರ ಸಂಘಗಳಲ್ಲಿರುವ ರೂ 1 ಲಕ್ಷಕ್ಕಿಂತ ಕಡಿಮೆ ಮೊತ್ತದ ಪ್ರಕರಣ ಇತ್ಯರ್ಥಕ್ಕೆ ಕೂಡ ಸಹಮತ ವ್ಯಕ್ತವಾಗಿದೆ. ಉಳಿದಂತೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಾಖಲಿಸಿದ. 90 ಪ್ರಕರಣಗಳು ವಿಚಾರಣೆಗೆ ಬಾಕಿಯಿವೆ. ಅವುಗಳಲ್ಲಿ ನಿಯಮದಂತೆ ದಂಡ ಕಟ್ಟಿಸಿಕೊಂಡು ಇತ್ಯರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು' ಎಂದು ಮಾಹಿತಿ ನೀಡಿದರು.
'ಪ್ರಕರಣಗಳಲ್ಲಿ ರಾಜಿ ಮಾಡಿಕೊಂಡಾಗ ಯಾರು ಸೋತರು, ಯಾರು ಗೆದ್ದರು ಅಂತರ್ಥವಲ್ಲ. ಎರಡೂ ಕಡೆಗಳಲ್ಲಿ ಸಾಮರಸ್ಯ ಕಾಯ್ದುಕೊಂಡಂತಾಗುತ್ತದೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.