ಡಾ.ಶಿವಾನಂದ ಕುಡ್ತಲಕರ್
ಕಾರವಾರ: ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದರು.
ಆಸ್ಪತ್ರೆಯ ಹಾಸಿಗೆಗೆ ಬೆಡ್ ಶೀಟ್ ಪೂರೈಸಿದ್ದಕ್ಕೆ ಬಿಲ್ ಮೊತ್ತ ಪಾವತಿಗೆ ಲಂಚ ಕೇಳಿದ್ದಾಗಿ ಅಧೀಕ್ಷಕರ ವಿರುದ್ಧ ಅಂಕೋಲಾದ ಗುತ್ತಿಗೆದಾರ ಮೊಹಸೀನ್ ಖಾನ್ ದೂರು ನೀಡಿದ್ದರು. ಗುರುವಾರ ₹30 ಸಾವಿರ ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದರು.
'ಬೆಡಶೀಟ್ ಪೂರೈಸಿದ್ದಕ್ಕೆ ಕ್ರಿಮ್ಸ್ ನಿಂದ ₹3,34,200 ಬಿಲ್ ಪಾವತಿ ಬಾಕಿ ಇತ್ತು. ಅದನ್ನು ಬಿಡುಗಡೆ ಮಾಡಲು ₹50 ಸಾವಿರಕ್ಕೆ ಡಾ.ಶಿವಾನಂದ ಬೇಡಿಕೆ ಇಟ್ಟಿದ್ದರು. ಎರಡು ದಿನದ ಹಿಂದೆ ₹20 ಸಾವಿರ ನೀಡಿದ್ದೆ ಎಂದು ಗುತ್ತಿಗೆದಾರರು ದೂರು ನೀಡಿದ್ದರು. ಲಂಚ ನೀಡುವಾಗಲೇ ಅಧೀಕ್ಷಕರನ್ನು ವಶಕ್ಕೆ ಪಡೆಯಲಾಯಿತು' ಎಂದು ಲೋಕಾಯುಕ್ತ ಎಸ್.ಪಿ ಕುಮಾರಚಂದ್ರ ತಿಳಿಸಿದರು.
'ಆರೋಪಿಯು ಗ್ರೇಡ್-1 ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ಅವರ ಮನೆ, ಖಾಸಗಿ ಕಚೇರಿಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ' ಎಂದರು.
ಲೋಕಾಯುಕ್ತ ಉಡುಪಿ ಜಿಲ್ಲೆಯ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.