ಗೋಕರ್ಣ: ಸಮೀಪದ ಮಾದನಗೇರಿಯ ಮಹಾಲಸಾ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕಾರ್ತಿಕ ಸಂಕಷ್ಠಿಯ ದಿನವಾದ ಗುರುವಾರ ಭಕ್ತರ ಸಾಗರವೇ ಹರಿದು ಬಂದಿತು. 10 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಜಿ.ಎಸ್.ಬಿ ಸಮಾಜದವರಿಗೆ ಈ ದೇವಸ್ಥಾನ ಅತ್ಯಂತ ಪವಿತ್ರವಾದದ್ದು. ಈ ದಿನ ಗೌಡ ಸಾರಸ್ವತ ಸಮಾಜದವರು ದೂರದ ಊರುಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಮುಖ್ಯ ಅರ್ಚಕರ ದರ್ಶನ ಕಾರ್ಯಕ್ರಮವೂ ಇದ್ದ ಕಾರಣ ರಾತ್ರಿ ಪೂರ್ಣ ದೇವಸ್ಥಾನದಲ್ಲಿ ಭಕ್ತರೇ ತುಂಬಿದ್ದರು.
ಭಕ್ತರ ಹರಕೆಯಂತೆ ದರ್ಶನ ಪಾತ್ರಿಗಳಾದ ಸುನೀಲ್ ಪೈ ಸುಮಾರು 20 ಸಾವಿರ ತೆಂಗಿನ ಕಾಯಿಯನ್ನು ಒಡೆದರು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಕುಮಟಾ ಶಾಸಕ ದಿನಕರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಸಹಿತ ಅನೇಕ ಜಿ.ಎಸ್.ಬಿ. ಸಮಾಜದ, ಇತರ ಸಮಾಜದ ಗಣ್ಯರು ಉಪಸ್ಥಿತರಿದ್ದರು. ಗೋವಾ, ಮುಂಬೈ, ಮಂಗಳೂರು, ಉಡುಪಿ, ಹುಬ್ಬಳ್ಳಿ ದೇವಸ್ಥಾನದ ಕುಳವಿಗಳು ಆಗಮಿಸಿದ್ದರು.
ದೇವಸ್ಥಾನದ ಟ್ರಸ್ಟಿಗಳಾದ ವಿನೋದ ಪೈ, ರಮಾಕಾಂತ ಪೈ, ಪುಂಡಲೀಕ ಪೈ, ಪ್ರಕಾಶ ಪೈ, ವಾಸುದೇವ ಪೈ, ದೀಪಕ ಪೈ ಉಪಸ್ಥಿರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.