ADVERTISEMENT

ಮಾವಿನಮನೆ ವಿದ್ಯುತ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯ

ಗ್ರಾಮಸ್ಥರಿಂದ ಅಧೀಕ್ಷಕ ಎಂಜಿನಿಯರ್ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 12:55 IST
Last Updated 4 ಜುಲೈ 2018, 12:55 IST
ಯಲ್ಲಾಪುರ ತಾಲ್ಲೂಕು ಮಾವಿನಮನೆ ವಿದ್ಯುತ್ ಅವ್ಯವಸ್ಥೆ ಸರಿಪಡಿಸುವ ಸಂಬಂಧ ಗ್ರಾಮಸ್ಥರು ಅಧೀಕ್ಷಕ ಎಂಜಿನಿಯರ್ ಶಶಿಧರ ಅವರನ್ನು ಭೇಟಿ ಮಾಡಿದರು
ಯಲ್ಲಾಪುರ ತಾಲ್ಲೂಕು ಮಾವಿನಮನೆ ವಿದ್ಯುತ್ ಅವ್ಯವಸ್ಥೆ ಸರಿಪಡಿಸುವ ಸಂಬಂಧ ಗ್ರಾಮಸ್ಥರು ಅಧೀಕ್ಷಕ ಎಂಜಿನಿಯರ್ ಶಶಿಧರ ಅವರನ್ನು ಭೇಟಿ ಮಾಡಿದರು   

ಶಿರಸಿ: ಯಲ್ಲಾಪುರ ತಾಲ್ಲೂಕು ಮಾವಿನಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎದುರಾಗಿರುವ ವಿದ್ಯುತ್ ಸಮಸ್ಯೆ, ಉಪಕರಣಗಳ ಕೊರತೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯ ಒದಗಿಸುವಂತೆ ಆ ಭಾಗದ ನಾಗರಿಕರು ಬುಧವಾರ ಇಲ್ಲಿನ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕಚೇರಿಗೆ ಭೇಟಿ ನೀಡಿ, ವಿನಂತಿಸಿದರು.

ಭಾರತೀಯ ಕಿಸಾನ್ ಸಂಘದ ಮಾವಿನಮನೆ ಘಟಕದ ನೇತೃತ್ವದಲ್ಲಿ ಎಂಜಿನಿಯರ್ ಶಶಿಧರ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು, ‘ತಾಲ್ಲೂಕು ಕೇಂದ್ರದಿಂದ 40 ಕಿ.ಮೀ ದೂರದಲ್ಲಿರುವ ಮಾವಿನಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಜಿರೆಗಳಲ್ಲಿ ವಿದ್ಯುತ್ ಮಾರ್ಗದ ಉನ್ನತೀಕರಣ, ತಂತಿಗಳ ಬದಲಾವಣೆ, ಜಿಒಎಸ್ ಹಾಗೂ ವಿದ್ಯುತ್ ಪರಿವರ್ತಕಗಳ ಮರು ಜೋಡಣೆ ಮಾಡುವಂತೆ ಮನವಿ ಮಾಡಲಾಗಿತ್ತು. ಅನುಷ್ಠಾನಗೊಂಡ ಕೆಲವು ಕಾಮಗಾರಿಗಳು ಸಹ ನಿಧಾನ ಗತಿಯಲ್ಲಿ ಸಾಗುತ್ತಿವೆ. ಇದರಿಂದ ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದಾರೆ’ ಎಂದರು.

ಮಾವಿನಮನೆ, ಬಾರೆ, ಕಾನೂರು, ಬೇಣದಗುಳಿ, ಮರಹಳ್ಳಿ ಗ್ರಾಮದ ಎಲ್ಲ ಟಿಸಿಗಳ ಪಕ್ಕದಲ್ಲಿ ತಂತಿಗಳಲ್ಲಿ ಬೆಂಕಿ ಏಳುವುದು ಕಾಣುತ್ತದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಮಳೆಗಾಲದ ನಿರ್ವಹಣೆ ಸಮರ್ಪಕವಾಗಿ ಆಗದ ಕಾರಣ ವಿದ್ಯುತ್ ಕೈಕೊಡುತ್ತಿದೆ ಎಂದು ಸಂಘಟನೆಯ ಮಾವಿನಮನೆ ಘಟಕದ ಅಧ್ಯಕ್ಷ ವಿಘ್ನೇಶ್ವರ ಭಟ್ಟ ಹೇಳಿದರು.

ADVERTISEMENT

ಪ್ರಮುಖರಾದ ಶಿವರಾಮ ಗಾಂವಕರ ಮಾತನಾಡಿ, ‘ವಿದ್ಯುತ್ತಿಗಾಗಿ ಇಡೀ ಜಿಲ್ಲೆಯನ್ನು ಒಪ್ಪಿಸಿದ್ದರೂ, ಇಲ್ಲಿನವರಿಗೆ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ. ಲೈನ್‌ಮನ್, ಗ್ಯಾಂಗ್‌ಮನ್, ಅಧಿಕಾರಿಗಳಿಲ್ಲ ಎನ್ನುವ ಬದಲು ಜನರಿಗೆ ಕೆಲಸ ಮಾಡಿಕೊಡಬೇಕು’ ಎಂದರು. ಹೆಸ್ಕಾಂನಲ್ಲಿ ಬಿಲ್ ಸಂಗ್ರಹಿಸಲು ಜನರಿಲ್ಲ ಎನ್ನುವ ಕಾಲ ಬಂದಿದೆ. ಇದರಿಂದ ಗ್ರಾಹಕರು ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ತ್ವರಿತವಾಗಿ ಬಿಲ್ ಸಂಗ್ರಹಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು. ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ದೀಪಕ ಕಾಮತ್, ಕಿಸಾನ ಸಂಘದ ಪ್ರಸನ್ನ ಗಾಂವಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.