ಕಾರವಾರ:ನಗರದ ಗುನಗಿವಾಡದ ಅತಿ ಸಣ್ಣ ಹಿಡುವಳಿದಾರ ಗಿರಿಧರ ಗುನಗಿ ಅವರಿಗೆ ಕೃಷಿ ಇಲಾಖೆಯಿಂದ ಪವರ್ ಟಿಲ್ಲರ್ ಕೊಡಿಸಲು ಪ್ರಯತ್ನಿಸಲಾಗುತ್ತಿದೆಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.
‘ಈ ವಿಚಾರವಾಗಿ ಕೃಷಿ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಗಿರಿಧರ ಅವರಿಗೆ ಅಗತ್ಯವಾದ ಸಹಕಾರವನ್ನು ನೀಡಲಾಗುವುದು’ ಎಂದು ಅವರು ಭರವಸೆ ನೀಡಿದ್ದಾರೆ.
ಕೇವಲ 20 ಗುಂಟೆ ಜಮೀನು ಹೊಂದಿರುವಗಿರಿಧರ (30), ತಮ್ಮ ಜಮೀನನ್ನು ಸಹೋದರಿ ಸುಜಾತಾ ಗುನಗಿ (25) ಜೊತೆಗೂಡಿ ಉಳುಮೆ ಮಾಡುತ್ತಿದ್ದಾರೆ.ಹಣಕಾಸಿನ ಕೊರತೆಯಿಂದ ಯಂತ್ರಗಳನ್ನು ಖರೀದಿಸಲಾಗದ ಅವರು, ನೇಗಿಲನ್ನು ಒತ್ತಿ ಹಿಡಿದು ಎಳೆದು ಮಣ್ಣನ್ನು ಹದ ಮಾಡುತ್ತಿದ್ದಾರೆ. 15 ವರ್ಷಗಳಿಂದ ಈ ರೀತಿ ಬೇಸಾಯದಲ್ಲಿ ತೊಡಗಿದ್ದರೂ ತಮ್ಮ ಕಾಯಕವನ್ನು ಬಿಡಲಿಲ್ಲ.
ಮಳೆಗಾಲದಲ್ಲಿ ಭತ್ತ ಬೆಳೆಯುವ ಅವರು, ಬೇಸಿಗೆಯಲ್ಲಿ ಕಾಯಿಪಲ್ಲೆ, ಪಾಲಕ್, ಹರಿವೆ ಮುಂತಾದ ಸೊಪ್ಪಿನ ಗಿಡಗಳನ್ನು ಕೃಷಿ ಮಾಡುತ್ತಾರೆ. ಕಾರವಾರದ ಮಾರುಕಟ್ಟೆಗೆ ಅದನ್ನು ಮಾರಾಟ ಮಾಡಿ ಬಂದ ಆದಾಯದಿಂದಲೇ ಜೀವನ ಸಾಗಿಸುತ್ತಾರೆ. ಗಿರಿಧರ ಎಂಟನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಅವರು ಮೂರು ವರ್ಷದ ಬಾಲಕನಾಗಿದ್ದಾಗ ಕೀಲೂತ ಸಮಸ್ಯೆ ಕಾಣಿಸಿಕೊಂಡಿತ್ತು. ನಿರಂತರ ಚಿಕಿತ್ಸೆ ಪಡೆದ ಪರಿಣಾಮ ಈಗ ಅವರು ಹೊಲದಲ್ಲಿ ಉಳುಮೆ ಮಾಡುವಷ್ಟು ಮತ್ತು ಸೈಕಲ್ ಸವಾರಿ ಮಾಡುವಷ್ಟು ಚೇತರಿಸಿಕೊಂಡಿದ್ದಾರೆ.
ಅಣ್ಣ– ತಂಗಿ ಸಾವಯವಪದ್ಧತಿಯಲ್ಲಿ ಬೆಳೆದ ತರಕಾರಿಯನ್ನು 70 ವರ್ಷದ ಅವರ ತಾಯಿ ಕಾರವಾರದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
‘ಮುಂಗಾರು ಆರಂಭವಾಗುವಲಕ್ಷಣಗಳು ಕಾಣಿಸುತ್ತಿರುವಂತೆಯೇದಿನವೂ ಬೆಳಿಗ್ಗೆ ಮತ್ತು ಸಂಜೆ ಎರಡು ತಾಸು ಉಳುಮೆ ಮಾಡುತ್ತೇವೆ. ಈಗಾಗಲೇಬಿತ್ತನೆ ಮಾಡಿದ ಭತ್ತದ ಬೀಜಗಳು ಮೊಳಕೆಯೊಡೆದಿವೆ’ ಎಂದು ಗಿರಿಧರ ಹೇಳಿದರು.
‘ಶಾಸಕಿ ರೂಪಾಲಿ ನಾಯ್ಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಸೌಲಭ್ಯ ಒದಗಿಸುವುದಾಗಿ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.