ಶಿರಸಿ: ತಾಲ್ಲೂಕಿನ ನೀರ್ನಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ಮಂಗವೊಂದು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಜನವಸತಿ ಪ್ರದೇಶದಿಂದ ದೂರದ ಜಾಗದ ಕಾಡಿನಲ್ಲಿ ಮಂಗ ಸತ್ತು ಬಿದ್ದಿತ್ತು. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹದ ಕೆಲವು ಪರೀಕ್ಷೆಗೆ ಕಳುಹಿಸಲಾಗಿದೆ. ಬಳಿಕ ಮೃತದೇಹವನ್ನು ಸುಡಲಾಗಿದೆ.
‘ಮಂಗನ ಮೃತದೇಹದ ಕೆಲ ಅಂಗಾಂಗಳನ್ನು ಶಿವಮೊಗ್ಗದ ಕೆಎಫ್ಡಿ ಪ್ರಯೋಗಾಲಯಕ್ಕೆ ರವಾನಿಸಿದ್ದೇವೆ. ಎರಡು ಮೂರು ದಿನದೊಳಗೆ ವರದಿ ಬರಲಿದ್ದು ಕೆಎಫ್ಡಿ ಕಾಯಿಲೆ ಇದೆಯೋ ಇಲ್ಲವೊ ಎಂಬುದು ನಂತರವಷ್ಟೆ ಖಚಿತವಾಗಲಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ ತಿಳಿಸಿದ್ದಾರೆ.
ನೆರೆಯ ಸಿದ್ದಾಪುರ ತಾಲ್ಲೂಕಿನ ಕೆಲವೆಡೆ ಮಂಗನ ಕಾಯಿಲೆ ಉಲ್ಬಣಿಸಿರುವುದರಿಂದ ಮಂಗ ಸತ್ತಿರುವುದು ಸ್ಥಳೀಯವಾಗಿ ಆತಂಕವನ್ನು ಸೃಷ್ಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.