ಮುಂಡಗೋಡ: ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಒಂದೆಡೆಯಾದರೇ, ಹೊರಗುತ್ತಿಗೆ ಮೇಲೆ ನೇಮಕಗೊಂಡವರು, ಒಂದು ವರ್ಷ ಅವಧಿ ಮುಗಿಯುವುದರೊಳಗೆ ರಾಜೀನಾಮೆ ನೀಡುತ್ತಿದ್ದಾರೆ. ಇದರಿಂದ ಕಾಯಂ ತಜ್ಞ ವೈದ್ಯರ ಕೊರತೆಯಿಂದ, ತಾಲ್ಲೂಕಿನ ಬಡರೋಗಿಗಳು ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿನ ತಾಲ್ಲೂಕು ಆಸ್ಪತ್ರೆಯು ತಜ್ಞ ವೈದ್ಯರ ಕೊರತೆ, ಇರುವ ವೈದ್ಯರುಗಳ ನಡುವೆ ಸಮನ್ವಯದ ಕೊರತೆ, ಸಣ್ಣ ಸಮಸ್ಯೆಗೂ ಹುಬ್ಬಳ್ಳಿಗೆ ಕಳಿಸಿಕೊಡುವ ಪದ್ಧತಿ, ರಾತ್ರಿ ಸಮಯದಲ್ಲಿ ವೈದ್ಯರು ಸಿಗದಿರುವುದು, ಹಲವು ವರ್ಷಗಳಿಂದ ಒಂದೇ ಕಡೆ ಬೀಡು ಬಿಟ್ಟಿರುವ ಸಿಬ್ಬಂದಿ..ಇವೆಲ್ಲ ಕಾರಣಗಳಿಂದ ಆಸ್ಪತ್ರೆ ವ್ಯವಸ್ಥೆ ನಲುಗುತ್ತಿದೆ ಎನ್ನುವ ಆರೋಪ ಸಾರ್ವತ್ರಿಕವಾಗಿದೆ.
ಔಷಧಿ ಲಭ್ಯವಿದ್ದರೂ ಚಿಕಿತ್ಸೆಗೆ ಬಳಸುವ ಬಗ್ಗೆ ನಿಷ್ಕಾಳಜಿ ತೋರಿದ್ದರಿಂದ, ಅಂಗನವಾಡಿಯಲ್ಲಿ ಹಾವು ಕಡಿದಿದ್ದ ಬಾಲಕಿ ಮೃತಪಟ್ಟ ಘಟನೆ ಕೆಲವು ತಿಂಗಳ ಹಿಂದೆ ನಡೆದಿತ್ತು. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆ ರಾಜೀನಾಮೆ ನೀಡಿದರು. ಇದರಿಂದ ಮೃತ ಬಾಲಕಿಯ ಕುಟುಂಬಕ್ಕೆ ನ್ಯಾಯ ಸಿಗದಿರುವುದು ಒಂದೆಡೆಯಾದರೆ, ಇದ್ದ ಒಬ್ಬ ವೈದ್ಯೆ ತಾಲ್ಲೂಕು ಆಸ್ಪತ್ರೆಯಿಂದ ಸಾರ್ವಜನಿಕ ಸೇವೆಯಿಂದ ದೂರವಾದರು. ಅಂತಿಮವಾಗಿ ಇದರ ಪರಿಣಾಮ ಬೀರಿದ್ದು ತಾಲ್ಲೂಕಿನ ಬಡರೋಗಿಗಳ ಮೇಲೆಯೇ.
ಚಿಕ್ಕ ಮಕ್ಕಳ ವೈದ್ಯ ರಾಜೀನಾಮೆ: ಕಳೆದ ಐದಾರು ತಿಂಗಳ ಹಿಂದೆ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯರಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಡಾ.ಕಿರಣ ಎಂಬುವರು ತಮ್ಮ ಹುದ್ದೆಗೆ ಈಚೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಮಕ್ಕಳ ವೈದ್ಯರಿಲ್ಲದೇ ಬಡರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಬೇಕಾಗಿದೆ.
'ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರತಿದಿನ 150ರಷ್ಟು ಮಕ್ಕಳ ತಪಾಸಣೆ ಮಾಡಿದರೂ, ಅನಗತ್ಯ ಕಿರುಕುಳ, ದೂರು ಸಹಿಸಿಕೊಳ್ಳಬೇಕಾಗಿದೆ. ಹೀಗಾಗಿ ರಾಜೀನಾಮೆ ನೀಡಿರುವೆ' ಎಂದು ಡಾ.ಕಿರಣ ಅಸಮಾಧಾನದಿಂದ ಹೇಳಿದರು.
ಹೊರಗುತ್ತಿಗೆ ಮೇಲೆ ನೇಮಕವಾಗಿ ಬಂದಿರುವ ವೈದ್ಯರಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಸೂಕ್ತ ಸ್ಪಂದನೆ, ಗೌರವ ಸಿಗುತ್ತಿಲ್ಲವೇ ಎಂಬುದರ ಬಗ್ಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಹರಿಸಬೇಕಾಗಿದೆ.
ಒಂದು ವರ್ಷ ಕೆಲಸ, ಆಮೇಲೆ ಖಾಸಗಿ ಆಸ್ಪತ್ರೆ: ಕಳೆದ ಕೆಲ ವರ್ಷಗಳಿಂದ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಮೇಲೆ ನೇಮಕಗೊಳ್ಳುವ ವೈದ್ಯರು, ಕೆಲವೇ ತಿಂಗಳುಗಳ ನಂತರ ತಮ್ಮದೇ ಖಾಸಗಿ ಕ್ಲಿನಿಕ್ ತೆರೆದು ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಾರೆ. ಆದರೆ, ತಾಲ್ಲೂಕು ಆಸ್ಪತ್ರೆಯಲ್ಲಿ ಅಷ್ಟೇ ಸಂಖ್ಯೆಯ ರೋಗಿಗಳನ್ನು ನೋಡಲು ಹಿಂದೇಟು ಹಾಕುತ್ತಾರೆ ಎಂಬ ಆರೋಪ ನಿರಂತರವಾಗಿದೆ.
'ತಾಲ್ಲೂಕು ಆಸ್ಪತ್ರೆಗೆ ವೈದ್ಯರಾಗಿ ಬರುವರಿಗೆ ಮೊದಲು ಸೇವಾ ಮನೋಭಾವ ಇರಬೇಕು. ಕೆಲವರು ಸಾರ್ವಜನಿಕರ ಮುಂದೆ ತಾವು ತಜ್ಞವೈದ್ಯ ಎಂಬುದನ್ನು ಗುರುತಿಸಿಕೊಳ್ಳುತ್ತಾರೆ. ಆಮೇಲೆ ಸ್ವಂತ ಕ್ಲಿನಿಕ್ ತೆರೆದು, ತಾಲ್ಲೂಕು ಆಸ್ಪತ್ರೆಯ ಬಗ್ಗೆ ಇಲ್ಲಸಲ್ಲದ ನೆಪ ಹೇಳುತ್ತಾರೆ. ತಾಲ್ಲೂಕು ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ ಎನ್ನುವ ವೈದ್ಯರು, ತಮ್ಮದೇ ಸ್ವಂತ ಕ್ಲಿನಿಕ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದರೆ, ಚಿಕಿತ್ಸೆ ನೀಡದೇ ಮರಳಿ ಕಳಿಸುತ್ತಾರೆಯೇ' ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ನರೇಂದ್ರ ಪವಾರ ಪ್ರಶ್ನಿಸುತ್ತಾರೆ.
'ತಾಲ್ಲೂಕು ಆಸ್ಪತ್ರೆಯಲ್ಲಿ ಯಾವ ವೈದ್ಯರ ಮೇಲೆಯೂ ಒತ್ತಡ ಹಾಕುವುದಿಲ್ಲ. ಸರ್ಕಾರದ ನಿಯಮಾವಳಿಯಂತೆ ಕೆಲಸ ಮಾಡುವಂತೆ ಹೇಳುತ್ತೇವೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.