ಪ್ರಜಾವಾಣಿ ವಾರ್ತೆ
ಗೋಕರ್ಣ: ಗೋಕರ್ಣದ ನಾಗಬೀದಿಯಲ್ಲಿರುವ ಪುರಾಣ ಪ್ರಸಿದ್ಧ ನಾಗೇಶ್ವರ ಲಿಂಗಕ್ಕೆ ಮಂಗಳವಾರ ನಾಗರಪಂಚಮಿಯ ನಿಮಿತ್ತ, ಸಾವಿರಾರು ಸಂಖ್ಯೆಯ ಭಕ್ತರು ಪೂಜೆ ಸಲ್ಲಿಸಿದರು.
ಭಕ್ತರು ಬೆಳಿಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಹಳ್ಳಿಯ ಜನರಲ್ಲದೇ ಪರ ಊರಿನ ಜನರೂ ನಾಗೇಶ್ವರ ದೇವಸ್ಥಾನದ ಆವರಣದಲ್ಲಿ ತಾವೇ ಪ್ರತಿಷ್ಠೆ ಮಾಡಿದ ನಾಗರ ಕಲ್ಲಿಗೆ ನೀರು, ಹಾಲುಗಳನ್ನೆಲ್ಲಾ ಹಾಕಿ ಪೂಜೆ ಮಾಡಿದರು. ಹಬ್ಬದ ಆಚರಣೆಗೆ ಮಳೆ ಬಿಡುವು ನೀಡಿತ್ತು.
ಈ ದೇವಸ್ಥಾನ ಅತ್ಯಂತ ಪುರಾತನವಾಗಿದ್ದು, ಸರ್ಪ ದೋಷವಿರುವವರು ಇಲ್ಲಿ ಬಂದು ಕರ್ಮ ಮಾಡಿದರೆ ಅವರ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ಪ್ರತೀತಿ ಪುರಾತನ ಕಾಲದಿಂದಲೂ ಕೇಳಿ ಬಂದಿದೆ. ಅದರಂತೆ ಪ್ರತಿ ವರ್ಷ ಸುತ್ತಮುತ್ತಲಿನ ಹಳ್ಳಿಯ ಜನ ಸೇರಿದಂತೆ ನಾಡಿನಾದ್ಯಂತ ಸಾವಿರಾರು ಜನ ನಾಗರಪಂಚಮಿಯ ದಿನ ಪೂಜೆ ಸಲ್ಲಿಸಲು ಇಲ್ಲಿಗೆ ಆಗಮಿಸುತ್ತಾರೆ. ಮುಖ್ಯ ಅರ್ಚಕ ವೇ. ಕೃಷ್ಣ ಜೋಗಭಟ್, ವೇ. ಪ್ರಸನ್ನ ಜೋಗಭಟ್ ಇತರ ಸಹ ವೈದಿಕರೊಂದಿಗೆ ಪೂಜಾ ಕಾರ್ಯ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.