ADVERTISEMENT

ಶಿರಸಿ: ರಾಷ್ಟ್ರೀಯತೆ ಚಿಂತನೆಯಿಂದ ಸಹಕಾರ ರಂಗದ ಏಳಿಗೆ

ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ ವೈದ್ಯ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 16:30 IST
Last Updated 8 ನವೆಂಬರ್ 2021, 16:30 IST
ಶಿರಸಿಯ ಟಿ.ಆರ್.ಸಿ. ಸಭಾಭವನದಲ್ಲಿ ಸೋಮವಾರ ನಡೆದ ಸಹಕಾರ ಭಾರತಿ ಉತ್ತರ ಕನ್ನಡ ಜಿಲ್ಲಾ ಘಟಕದ ಅಭ್ಯಾಸ ವರ್ಗ ಉದ್ದೇಶಿಸಿ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ ವೈದ್ಯ ಮಾತನಾಡಿದರು
ಶಿರಸಿಯ ಟಿ.ಆರ್.ಸಿ. ಸಭಾಭವನದಲ್ಲಿ ಸೋಮವಾರ ನಡೆದ ಸಹಕಾರ ಭಾರತಿ ಉತ್ತರ ಕನ್ನಡ ಜಿಲ್ಲಾ ಘಟಕದ ಅಭ್ಯಾಸ ವರ್ಗ ಉದ್ದೇಶಿಸಿ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ ವೈದ್ಯ ಮಾತನಾಡಿದರು   

ಶಿರಸಿ: ರಾಷ್ಟ್ರೀಯತೆಯ ಚಿಂತನೆಯೊಂದಿಗೆ ಮುನ್ನಡೆದಾಗ ಸಹಕಾರ ಕ್ಷೇತ್ರ ಏಳಿಗೆ ಸಾಧಿಸಲು ಸಾಧ್ಯ ಎಂದು ಸಹಕಾರ ಭಾರತಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ರಮೇಶ ವೈದ್ಯ ಪ್ರತಿಪಾದಿಸಿದರು.

ಇಲ್ಲಿನ ಟಿ.ಆರ್.ಸಿ. ಸಭಾಭವನದಲ್ಲಿ ಸೋಮವಾರ ಸಹಕಾರ ಭಾರತಿ ಉತ್ತರ ಕನ್ನಡ ಜಿಲ್ಲಾ ಘಟಕ ಆಯೋಜಿಸಿದ್ದ ಅಭ್ಯಾಸ ವರ್ಗದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ದೇಶದ ಜಿಡಿಪಿಯಲ್ಲಿ ಸಹಕಾರ ಕ್ಷೇತ್ರದ ಪಾಲು ದೊಡ್ಡ ಮಟ್ಟದ್ದಿದೆ. ಜಾತಿ, ಹಣ ಬಲದ ಹೊರತಾಗಿ ರಾಷ್ಟ್ರೀಯ ಚಿಂತನೆಯೊಂದಿಗೆ ಸಹಕಾರ ಭಾರತಿ ಸಹಕಾರ ಕ್ಷೇತ್ರವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸಹಕಾರ ಕ್ಷೇತ್ರದಲ್ಲಿ ರಾಷ್ಟ್ರೀಯ ದೃಷ್ಟಿಕೋನ ಪರಿಣಾಮಕಾರಿಯಾಗಿ ಜಾಗೃತಗೊಳ್ಳಬೇಕು. ಸಹಕಾರ ಸಂಸ್ಥೆಗಳು ಸದಸ್ಯರ ಶ್ರೇಯೊಭಿವೃದ್ಧಿ ಗಮನದಲ್ಲಿಟ್ಟು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಸಹಕಾರ ಭಾರತಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೃಷ್ಣಾ ರೆಡ್ಡಿ, ‘ಸಹಕಾರ ರಂಗದಲ್ಲಿ ಕಾಲಕ್ಕೆ ತಕ್ಕಂತೆ ತರಬೇಕಾದ ಬದಲಾವಣೆಗೆ ಸಹಕಾರ ಭಾರತಿ ನೀಡಿದ ಸಲಹೆಯನ್ನು ಕೇಂದ್ರ ಸರ್ಕಾರ ಗೌರವಿಸುತ್ತಿದೆ’ ಎಂದರು.

ರಾಜ್ಯ ಘಟಕದ ಕಾರ್ಯದರ್ಶಿ ಬಿ.ಆರ್. ಮಂಜುನಾಥ, ರಾಜ್ಯ ಸಮಿತಿ ಸದಸ್ಯ ಶಂಭುಲಿಂಗ ಹೆಗಡೆ ನಡಗೋಡ, ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರ ಒಕ್ಕೂಟದ ಅಧ್ಯಕ್ಷೆ ಸರಸ್ವತಿ ಎನ್.ರವಿ ಇದ್ದರು. ಸಹಕಾರ ಭಾರತಿ ಜಿಲ್ಲಾ ಘಟಕದ ಅಧ್ಯಕ್ಷ ಮೋಹನದಾಸ ನಾಯಕ ಸ್ವಾಗತಿಸಿದರು. ಸಿಂಧುಚಂದ್ರ ಸಂಗಡಿಗರು ಸಹಕಾರ ಗೀತೆ ಹಾಡಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು.

ಸ್ವದೇಶಿ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸಿ
‘ವಿದೇಶಿ ವಸ್ತುಗಳ ಮಾರಾಟದ ಬದಲು ಸ್ವದೇಶಿ ಸಾಮಗ್ರಿಗಳ ಮಾರಾಟಕ್ಕೆ ಸಹಕಾರ ಸಂಸ್ಥೆಗಳು ವೇದಿಕೆ ಕಲ್ಪಿಸಬೇಕು’ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

‘ರೈತರಿಂದ ಬೆಳೆದ ಸಂಸ್ಥೆಗಳು ರೈತರ ಹಿತಕಾಯುವ ಕೆಲಸ ಮಾಡುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಿ ಮಾರುಕಟ್ಟೆ ಒದಗಿಸಿದರೆ ರೈತರಿಗೆ ಅನುಕೂಲ ಹೆಚ್ಚು’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.