ಶಿರಸಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿರುವ ಇಂದಿನದಿನಗಳಲ್ಲಿಶ್ರದ್ಧಾಭಕ್ತಿಯ ಕೇಂದ್ರಗಳ ರಕ್ಷಣೆಯ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನದ್ದಾಗಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ನಗರದ ಸ್ವಾದಿ ದಿಗಂಬರ ಜೈನ ಮಠದಲ್ಲಿ ಆಯೋಜಿಸಲಾದ ನವರಾತ್ರಿ ಆರಾಧನೆ ಮತ್ತು ವಿಜಯದಶಮಿ ಉತ್ಸವ ಸಮಾರಂಭದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು.
ಧಾರ್ಮಿಕವಾಗಿ ಅವಹೇಳನ ಮಾಡುವ ವ್ಯಕ್ತಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕು. ಸನಾತನ ಸಂಸ್ಕೃತಿ ಬಗ್ಗೆ ಅಗೌರವ ತೋರುವ, ವಿವಾದ ಸೃಷ್ಟಿಸುವ ಜನರಿಗೆ ತಕ್ಕ ಪಾಠ ಕಲಿಸಬೇಕು. ಅಂಥ ರಾಷ್ಟ್ರ ವಿರೋಧಿಗಳಿಗೆ ಜಾಗೃತಿಯ ಸಂದೇಶ ನೀಡಬೇಕು ಎಂದು ಸಲಹೆ ನೀಡಿದರು.
ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ‘ಇಂದ್ರಿಯಗಳ ಮೇಲೆ ವಿಜಯ ಸಾಧಿಸಬೇಕು. ಆತ್ಮದ ಅವಗುಣಗಳ ನಾಶವಾಗಬೇಕು. ಇಂದ್ರಿಯ ಜಯವೇ ನಿಜವಾದ ವಿಜಯ ದಶಮಿಯಾಗಿದೆ’ ಎಂದರು.
ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ಶೈಲೇಂದ್ರ ಗೌಡ ಮಾತನಾಡಿ, ‘ಈ ಜಿಲ್ಲೆಯಲ್ಲಿ ಜೈನರ ಆಳ್ವಿಕೆಯಿದ್ದ ಕಾಲದಲ್ಲಿ ಸಾವಿರಾರು ಜಿನ ಮಂದಿರ, ಜಿನ ಬಿಂಬಗಳಿದ್ದವು. ಆದರೆ, ಈಗ 50ರ ಆಸುಪಾಸಿನಲ್ಲಿದ್ದು, ಅವುಗಳ ರಕ್ಷಣೆ ಆಗಬೇಕು’ ಎಂದು ಆಶಿಸಿದರು.
ಇದೇ ವೇಳೆ ‘ಆತ್ಮ ಕಲ್ಯಾಣದ 108 ಸೂತ್ರಗಳು’ ಕೈಪಿಡಿ ಬಿಡುಗಡೆ ಮಾಡಲಾಯಿತು. ಹೊಂಬುಜ ಮಠದ 15 ಅಡಿ ಎತ್ತರದ ರಥವನ್ನು ಈ ವೇಳೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯ ನರಸಿಂಹ ಹೆಗಡೆ, ಸೋಂದಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಭಂಡಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.