ADVERTISEMENT

ಮಹಿಳೆಯ ಜೊತೆ ಅಸಭ್ಯ ವರ್ತನೆ ಖಂಡಿಸಿದ ವ್ಯಕ್ತಿಯ ಕೊಲೆ

​ಪ್ರಜಾವಾಣಿ ವಾರ್ತೆ
Published 3 ಮೇ 2021, 16:34 IST
Last Updated 3 ಮೇ 2021, 16:34 IST
ಕೊಲೆ ಆರೋಪಿ ಅಬ್ದುಲ್ ಕೋಟೆಬಾಗಿಲ
ಕೊಲೆ ಆರೋಪಿ ಅಬ್ದುಲ್ ಕೋಟೆಬಾಗಿಲ   

ಹೊನ್ನಾವರ: ತಾಲ್ಲೂಕಿನ ಚಂದಾವರದಲ್ಲಿ ಸೋಮವಾರ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಶುರುವಾದ ಜಗಳವು, ಒಬ್ಬನ ಕೊಲೆಯಲ್ಲಿ ಅಂತ್ಯ ಕಂಡಿದೆ.

ಚಂದಾವರ ಜನತಾ ಕಾಲೊನಿಯ ರಿಕ್ಷಾ ಚಾಲಕ ಅಬು ತಾಲೀಬ್ ಮಕ್ದೂಮ್ ಸಾಬ್ ಶೇಖ್ (48) ಕೊಲೆಯಾದ ವ್ಯಕ್ತಿ. ಆರೋಪಿ, ಅದೇ ಗ್ರಾಮದ ಅಬ್ದುಲ್ ಸಲೀನ್ ಅಬ್ದುಲ್ ಜಬ್ಬಾರ್ ಕೋಟೆಬಾಗಿಲ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅಬು ಹಾಗೂ ಅಬ್ದುಲ್‌ ಅಕ್ಕಪಕ್ಕದ ಮನೆಯವರಾಗಿದ್ದರು. ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಅಬ್ದುಲ್‌ನನ್ನು ಅಬು ತಾಲೀಬ್ ತರಾಟೆಗೆ ತೆಗೆದುಕೊಂಡಿದ್ದರು. ಆಗ ಇಬ್ಬರ ನಡುವೆ ಜಗಳ ನಡೆಯಿತು. ಆಗ ಅಬ್ದುಲ್ ಅವರು ಅಬುತಾಲೀಬ್‌ನ ಚಾಕುವಿನಿಂದ ಇರಿದಿದ್ದಾರೆ.

ADVERTISEMENT

‘ತೀವ್ರ ಸ್ವರೂಪದಿಂದ ಗಾಯಗೊಂಡ ಅಬುತಾಲೀಬ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ.

ಸಿ.ಪಿ.ಐ ಶ್ರೀಧರ ತಮ್ಮ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಾಧ ವಿಭಾಗದ ಪಿ.ಎಸ್.ಐ. ಸಾವಿತ್ರಿ ನಾಯ್ಕ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.