ಕಾರವಾರ: ‘ಫೆ.24ರಂದು ಶಿರಸಿ ಬಂದ್ ಮಾಡುವುದಕ್ಕೂ ಉತ್ತರಕನ್ನಡವನ್ನು ಇಬ್ಭಾಗ ಮಾಡಿ ಪ್ರತ್ಯೇಕ ಜಿಲ್ಲೆ ಸ್ಥಾಪನೆಗೂ ಯಾವುದೇ ಸಂಬಂಧವಿಲ್ಲ. ಶಿರಸಿ ಜಿಲ್ಲೆ ಸ್ಥಾಪನೆಯ ವಿಚಾರದಲ್ಲಿ ಯಾರೋ ಒಬ್ಬರಿಂದ ನಿರ್ಧಾರವಾಗಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರತ್ಯೇಕ ಜಿಲ್ಲೆ ಸ್ಥಾಪನೆಯ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರು, ಲೋಕಸಭಾ ಸದಸ್ಯರು, ಬುದ್ಧಿಜೀವಿಗಳ ಜೊತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಬೇಕು. ನಂತರ ಜಿಲ್ಲಾ ಕೇಂದ್ರವು ಯಲ್ಲಾಪುರದಲ್ಲೋ, ಶಿರಸಿಯಲ್ಲೋ ಅಥವಾ ಹಳಿಯಾಳದಲ್ಲೋ ಎಂದು ನಿರ್ಧರಿಸವಾಗಬೇಕು. ಅದಕ್ಕೆ ನಿರ್ದಿಷ್ಟವಾದ ದಿನ ಇನ್ನೂ ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು.
‘ಇವತ್ತು ಶಿರಸಿಯವರು ಬಂದ್ ಮಾಡುವುದಾಗಿ ಹೇಳುತ್ತಾರೆ. ನಾಳೆ ಯಲ್ಲಾಪುರದವರು ಬಳಿಕ ಹಳಿಯಾಳದವರು ಇದೇ ರೀತಿ ಮಾಡುತ್ತಾರೆ. ಹಾಗಾಗಿ ಬಂದ್ಗೂ ಶಿರಸಿ ಜಿಲ್ಲೆ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ನನ್ನ ವೈಯಕ್ತಿಕ ನಿಲುವೇನಿಲ್ಲ’ ಎಂದು ಹೇಳಿದರು.
‘ಎಲ್ಲರಿಗೂ ನನ್ನ ರಕ್ಷಣೆಯಿದೆ’:
ಯಲ್ಲಾಪುರ ತಾಲ್ಲೂಕಿನ ಮದ್ನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಸಂದರ್ಭದಲ್ಲಿ ಆದ ಗಲಾಟೆ ಸಂಬಂಧ ಸಚಿವ ಹೆಬ್ಬಾರ ಪ್ರತಿಕ್ರಿಯಿಸಿದರು. ವಿಜಯ ಮಿರಾಶಿಗೆ ತಮ್ಮ ರಕ್ಷಣೆಯಿರುವ ಆರೋಪವಿದೆ ಎಂದು ಸುದ್ದಿಗಾರರು ಕೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿ, ‘ಮಿರಾಶಿಗೆ ಮಾತ್ರವಲ್ಲ, ಎಲ್ಲರಿಗೂ ನನ್ನ ರಕ್ಷಣೆಯಿದೆ. ಎರಡೂ ಗುಂಪಿನವರು ಪ್ರತಿಭಟನೆ ಮಾಡಿದ್ದಾರೆ. ಅಲ್ಲಿ ವೈಯಕ್ತಿಕ ತೊಂದರೆಗಳಾಗಿವೆ. ಎರಡೂ ಕಡೆಯವರನ್ನು ಕರೆದು ಮಾತನಾಡುತ್ತನೆ. ಇದು ಪಕ್ಷಕ್ಕೆ ಸಂಬಂಧಿಸಿದ ವಿಚಾರವಲ್ಲ. ಇಂಥ ಬೆಳವಣಿಗೆಗಳು ಪಕ್ಷಕ್ಕೆ, ಸಂಘಟನೆಗೆ ಶೋಭೆ ತರುವುದಿಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.