ADVERTISEMENT

ಉತ್ತರ ಕನ್ನಡ | ನರೇಗಾ: ಒಂದು ಲಕ್ಷ ಉದ್ಯೋಗ ಸೃಷ್ಟಿ

ಕಳೆದ ವರ್ಷಕ್ಕಿಂತ ಮೂರು ಸಾವಿರ ಮಾನವ ದಿನ ಏರಿಕೆ: ತೋಟಗಾರಿಕೆ ಕ್ಷೇತ್ರಕ್ಕೆ ವರ

ಎಂ.ಜಿ.ಹೆಗಡೆ
Published 9 ಏಪ್ರಿಲ್ 2024, 6:22 IST
Last Updated 9 ಏಪ್ರಿಲ್ 2024, 6:22 IST
ಹೊನ್ನಾವರ ತಾಲ್ಲೂಕಿನ ಮಾವಿನಕುರ್ವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಿಸಲಾಗಿದೆ
ಹೊನ್ನಾವರ ತಾಲ್ಲೂಕಿನ ಮಾವಿನಕುರ್ವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಿಸಲಾಗಿದೆ   

ಹೊನ್ನಾವರ: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಅವಕಾಶ ಸೃಷ್ಟಿಸುವಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ)  ಈ ಬಾರಿ ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ ತೋರಿ ಗಮನ ಸೆಳೆದಿದೆ.

132 ಸಮುದಾಯ ಕಾಮಗಾರಿ ಸೇರಿದಂತೆ ಒಟ್ಟೂ 1,279 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ₹5 ಕೋಟಿ ವೆಚ್ಚದ ಸೌಲಭ್ಯ ಒದಗಿಸುವ ಜತೆಗೆ ಒಂದು ಲಕ್ಷ ಮಾನವ ದಿನಗಳ ಕಾಮಗಾರಿ ನಡೆಸಲಾಗಿದೆ. ತಾಲ್ಲೂಕಿನ ವಿವಿಧೆಡೆಗಳಲ್ಲಿ 83 ಕೃಷಿ ಬಾವಿಗಳು, 150 ದನದ ಕೊಟ್ಟಿಗೆಗಳು, ಗೋಬರ್ ಅನಿಲ ಸ್ಥಾವರ, ಎರೆಹುಳು ತೊಟ್ಟಿ ನಿರ್ಮಿಸುವ ಮೂಲಕ ಕೃಷಿಕರಿಗೆ ಹೆಚ್ಚಿನ ಉತ್ತೇಜನ ನೀಡಿರುವುದನ್ನು ಯೋಜನೆಯ ಅಂಕಿ-ಸಂಖ್ಯೆ ತಿಳಿಸುತ್ತದೆ.

‘ಬಜೆಟ್ ಮಂಡನೆ ನಂತರದಲ್ಲಿ ವಿವಿಧ ಯೋಜನೆಗಳಿಗೆ ಬರಬೇಕಾದ ಸರ್ಕಾರದ ಅನುದಾನ ಇನ್ನೂ ಬರಬೇಕಿರುವ ಸಂದರ್ಭದಲ್ಲಿ ನರೇಗಾ ಸಾರ್ವಜನಿಕ ವಲಯದ ಕೆಲವು ಅಗತ್ಯ ಬೇಡಿಕೆಗಳನ್ನು ಪೂರೈಸುವ ಮೂಲಕ ಕಾಮಗಾರಿಗಳು ಚಾಲ್ತಿಯಲ್ಲಿರುವಂತೆ ಮಾಡಿದೆ. ಶಾಲೆಗಳಲ್ಲಿ ಅಡುಗೆ ಕೋಣೆ, ಆವರಣಗೋಡೆ, ಶೌಚಾಲಯ, ಅಂಗನವಾಡಿ ಕಟ್ಟಗಳ ನಿರ್ಮಾಣ ಕಾಮಗಾರಿಗೆ ಯೋಜನೆಯ ನೆರವು ಸಿಕ್ಕಿದೆ. ನರೇಗಾ ಅಡಿಯಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳು ಹೆಚ್ಚಿನ ಸಾಧನೆ ತೋರಿದ್ದು 78 ಸಾವಿರ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಜವಾಬ್ದಾರಿ ನಿರ್ವಹಿಸಿವೆ’ ಎಂದು ನರೇಗಾ ವಿಭಾಗದ ಅಧಿಕಾರಿಗಳು ವಿವರಿಸುತ್ತಾರೆ.

ADVERTISEMENT

‘ನರೇಗಾ ಯೋಜನೆಯ ನೆರವಿನಿಂದ ಎರೆಹುಳು ತೊಟ್ಟಿ ನಿರ್ಮಿಸಿಕೊಂಡಿದ್ದೇವೆ. ಯೋಜನೆಯಿಂದ ಕೃಷಿಗೆ ಅನುಕೂಲವಾಗಿದೆ. ಗ್ರಾಮದ ಜನರಿಗೂ ಉದ್ಯೋಗ ದೊರೆಯುವಂತಾಗಿದೆ’ ಎಂದು ಸಾಲ್ಕೋಡ ಗ್ರಾಮದ ಕೃಷಿಕ ಗಣಪತಿ ನಾರಾಯಣ ನಾಯ್ಕ ಹೇಳುತ್ತಾರೆ.

‘ನರೇಗಾ ಅನುಷ್ಠಾನದಲ್ಲಿ ಅರಣ್ಯ ಇಲಾಖೆ ಹಿಂದೆ ಬಿದ್ದಿದೆ. ತಾಲ್ಲೂಕಿನಲ್ಲಿ ಅರಣ್ಯ ಭೂಮಿಯ ಪ್ರಮಾಣ ಹೆಚ್ಚಿದೆಯಾದರೂ ಅರಣ್ಯ ಇಲಾಖೆ ಕೇವಲ 14 ಸಾವಿರ ಕಾಮಗಾರಿಗಳನ್ನು ಮಾತ್ರ ಕೈಗೊಂಡಿದೆ. ಅರಣ್ಯ ಇಲಾಖೆಯ ಹೊನ್ನಾವರ ಅರಣ್ಯ ವಲಯದ ನಿರ್ಲಕ್ಷ್ಯದ ಕುರಿತಂತೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗಳಲ್ಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

‘ತೋಟಗಾರಿಕಾ ಇಲಾಖೆ 7 ಸಾವಿರ ಹಾಗೂ ಹಾಗೂ ಕೃಷಿ ಇಲಾಖೆ 2 ಸಾವಿರ ಕಾಮಗಾರಿಗಳನ್ನು ನಡೆಸಿವೆ. ಒಟ್ಟಾರೆಯಾಗಿ ಕಳೆದ ಆರ್ಥಿಕ ವರ್ಷಕ್ಕಿಂತ ಪ್ರಸಕ್ತ ಸಾಲಿನಲ್ಲಿ 3 ಸಾವಿರದಷ್ಟು ಹೆಚ್ಚಿನ ಮಾನವ ದಿನಗಳ ಕೆಲಸ ನಡೆದಿದೆ’ ಎಂದೂ ತಿಳಿಸಿದರು.

ಕೃಷ್ಣಾನಂದ ಕೆ. ಸಹಾಯಕ ನಿರ್ದೇಶಕ ನರೇಗಾ
ನರೇಗಾ ಯೋಜನೆಯಡಿ ಜಮೀನಿನಲ್ಲಿ ಅಪ್ಪೆಮಿಡಿ ಡ್ರ್ಯಾಗನ್ ಫ್ರುಟ್ ಮೊದಲಾದ ತೋಟ ನಿರ್ಮಾಣಕ್ಕೆ ರೈತರಿಂದ ಬೇಡಿಕೆ ಹೆಚ್ಚುತ್ತಿದೆ. ಕಾಮಗಾರಿಗಳ ಗರಿಷ್ಠ ಮೊತ್ತವನ್ನು ಕುಟುಂಬವೊಂದಕ್ಕೆ ₹2.5 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು ಕೂಲಿ ಮೊತ್ತ ₹349ಕ್ಕೆ ಏರಿಕೆಯಾಗಿದೆ.
ಕೃಷ್ಣಾನಂದ ಕೆ. ನರೇಗಾ ವಿಭಾಗದ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.