ಶಿರಸಿ: ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಹಳೆ ಕಟ್ಟಡ ತೆರವುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕವನ್ನು ಹೊಸ ಕಟ್ಟಡದ ಹಿಂಭಾಗಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ದೇವರಾಜ ಆರ್. ತಿಳಿಸಿದರು.
ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮವರ ಜತೆ ಮಾತನಾಡಿದ ಅವರು, ‘ಆಸ್ಪತ್ರೆಯ ಕೋವಿಡ್ ವಾರ್ಡ್ ಇರುವ ಕಟ್ಟಡವೂ ಮಾರ್ಚ್ ವೇಳೆಗೆ ತೆರವುಗೊಳ್ಳಲಿದೆ. ಹೀಗಾಗಿ ಹೊಸ ಕಟ್ಟಡದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಬೇಕಿದೆ. ಅದಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗುವದು. ವೆಂಟಿಲೇಟರ್ ಅಗತ್ಯವಿದ್ದರೆ ನೆರವು ನೀಡುವಂತೆ ಟಿಎಸ್ಎಸ್ ಆಸ್ಪತ್ರೆಗೆ ಸೂಚಿಸಲಾಗಿದೆ’ ಎಂದು ಹೇಳಿದರು.
‘ಕೋವಿಡ್ ಪ್ರಯೋಗಾಲಯದಲ್ಲಿ ಪ್ರತಿನಿತ್ಯ ಸರಾಸರಿ 1200 ಗಂಟಲುದ್ರವ ತಪಾಸಿಸಲಾಗುತ್ತಿದೆ. ಇಲ್ಲಿಂದ ಕಚಿತ ವರದಿ ಬೇಗನೆ ರವಾನೆಯಾಗುತ್ತಿದ್ದರೂ, ತಾಂತ್ರಿಕ ಕಾರಣದಿಂದ ಅಂತಿಮ ವರದಿ ಪ್ರಕಟಗೊಳ್ಳಲು ವಿಳಂಬವಾಗುತ್ತಿದೆ. ಇದನ್ನು ಸರಿಪಡಿಸಲು ಚರ್ಚಿಸಲಾಗಿದೆ’ ಎಂದರು.
‘ಶಿರಸಿ–ಕುಮಟಾ ಹೆದ್ದಾರಿ ಕಾಮಗಾರಿಗೆ ವೇಗ ನೀಡಲು ಸೂಚಿಸಲಾಗಿದೆ. ಜಲ್ಲಿಕಲ್ಲುಗಳ ಕೊರತೆಯ ಕಾರಣವನ್ನು ಗುತ್ತಿಗೆ ಕಂಪನಿ ನೀಡುತ್ತಿದೆ. ಕೆಲಸ ತ್ವರಿತಗತಿ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಬಂಡಲ ಮತ್ತು ಸಿದ್ದಾಪುರ ತಾಲ್ಲೂಕಿನಲ್ಲಿರುವ ಕಲ್ಲು ಕ್ವಾರಿಗಳನ್ನು ಪುನರಾರಂಭಿಸಲು ಕೋರಿ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದರು.
‘ನಗರದಲ್ಲಿ ರಸ್ತೆ ವಿಸ್ತರಣೆ, ಹೊಸ ರಸ್ತೆ ನಿರ್ಮಾಣ ಕೆಲಸಕ್ಕೂ ವೇಗ ನೀಡಲು ಸೂಚಿಸಲಾಗಿದ್ದು, ಜಾತ್ರೆಯ ಒಳಗೆ ಕೆಲಸ ಪೂರ್ಣಗೊಳ್ಳಲಿದೆ’ ಎಂದರು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.