ಶಿರಸಿ: ಹವಾಮಾನದಲ್ಲಿ ಉಂಟಾಗುವ ಬದಲಾವಣೆಯಿಂದಾಗಿ ಮುಂದಿನ ಎರಡು, ಮೂರು ದಶಕಗಳಲ್ಲಿ ಮಳೆಯಾಶ್ರಿತ ಭತ್ತದ ಇಳುವರಿಯಲ್ಲಿ ಕುಸಿತ ಕಾಣುವ ಮುನ್ಸೂಚನೆ ಇದೆ ಎಂದು ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಡಾ.ಆರ್.ವಾಸುದೇವ ಹೇಳಿದರು.
ಇಲ್ಲಿನ ಅರಣ್ಯ ಕಾಲೇಜು ಮತ್ತು ಕೃಷಿ ವಿಜ್ಞಾನ ಕೇಂದ್ರ ಶನಿವಾರ ರೈತರಿಗೆ ಗ್ರಾಮೀಣ ಕೃಷಿ ಮೌಸಮ್ ಸೇವಾ ಯೋಜನೆಯಡಿ ಹವಾಮಾನ ಮುನ್ಸೂಚನೆ ಆಧಾರಿತ ಕೃಷಿ ಸಲಹಾ ಸೇವೆಗಳ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ವಾತಾವರಣ ಬದಲಾವಣೆಯಿಂದ ಅನ್ಯ ದೇಶಗಳಲ್ಲಿ ಬೆಳೆಗಳು ಹಾಗೂ ಕಾಡಿನ ಮರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ’ ಎಂದರು.
ಅರಣ್ಯ ಕಾಲೇಜಿನ ಡೀನ್ ಡಾ.ಕೆ.ಎಸ್.ಚೆನ್ನಬಸಪ್ಪ ಕಾರ್ಯಾಗಾರ ಉದ್ಘಾಟಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜು ಎಂ.ಜೆ. ಅಧ್ಯಕ್ಷತೆ ವಹಿಸಿದ್ದರು.
ಡಾ.ಶಿವಶಂಕರಮೂರ್ತಿ ಬದಲಾದ ವಾತಾವರಣಕ್ಕೆ ಕೃಷಿ ತಾಂತ್ರಿಕತೆ ಕುರಿತು ವಿವರಿಸಿದರು. ಹವಾಮಾನ ಮುನ್ಸೂಚನಾ ಘಟಕದ ಕಾರ್ಯಚಟುವಟಿಕೆಗಳ ಬಗ್ಗೆ ಎಸ್.ಬಿ.ಯಲೇದಹಳ್ಳಿ ತಿಳಿಸಿದರು. ಭತ್ತಕ್ಕೆ ಕಾಡುವ ಕೀಟ ಬಾಧೆ, ಅವುಗಳ ಹತೋಟಿ ಕ್ರಮಗಳ ಕುರಿತು ಡಾ.ರೂಪಾ ಪಾಟೀಲ ತಿಳಿಸಿದರು. ಡಾ. ಶಿದ್ದಪ್ಪ ಕನ್ನೂರ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.