ADVERTISEMENT

ಪಂಡಿತ ಆಸ್ಪತ್ರೆ : ಹೋರಾಟ ಸಮಿತಿ ರಚನೆಗೆ ಸಿದ್ಧತೆ

ಸಮಾನ ಮನಸ್ಕರ ಚಿಂತನ ಮಂಥನ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 13:51 IST
Last Updated 15 ಜೂನ್ 2025, 13:51 IST
ಶಿರಸಿಯಲ್ಲಿ ನಡೆದ ಪಂಡಿತ ಆಸ್ಪತ್ರೆಯ ಮುಂದಿನ ಹೋರಾಟದ ರೂಪುರೇಷೆ ಕುರಿತಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅನಂತಮೂರ್ತಿ ಹೆಗಡೆ ಮಾತನಾಡಿದರು
ಶಿರಸಿಯಲ್ಲಿ ನಡೆದ ಪಂಡಿತ ಆಸ್ಪತ್ರೆಯ ಮುಂದಿನ ಹೋರಾಟದ ರೂಪುರೇಷೆ ಕುರಿತಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅನಂತಮೂರ್ತಿ ಹೆಗಡೆ ಮಾತನಾಡಿದರು   

ಶಿರಸಿ: ಇಲ್ಲಿನ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿ ಈ ಹಿಂದಿನ ಸರ್ಕಾರದ ಆದೇಶದಂತೆ ಎಲ್ಲ ಕಾಮಗಾರಿಗಳು, ಯಂತ್ರೋಪಕರಣಗಳ ಖರೀದಿ ಹಾಗೂ ವೈದ್ಯರ ನೇಮಕ ಪ್ರಕ್ರಿಯೆ ತುರ್ತಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸಮಾನ ಮನಸ್ಕರ ಸಮಿತಿ ರಚಿಸಿ, ಕ್ಷೇತ್ರದ ಶಾಸಕರು, ಉಸ್ತುವಾರಿ ಸಚಿವರು, ಮಂತ್ರಿಗಳನ್ನು ಭೇಟಿ ಮಾಡಿ, ಮನವಿ ನೀಡಲು ಒಕ್ಕೊರೊಲ ನಿರ್ಣಯ ಕೈಗೊಳ್ಳಲಾಗಿದೆ. 

ಶನಿವಾರ ಸಂಜೆ ನಗರದ ನೆಮ್ಮದಿ ಕುಟೀರದಲ್ಲಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಡೆದ ಪಂಡಿತ ಆಸ್ಪತ್ರೆಯ ಮುಂದಿನ ಹೋರಾಟದ ರೂಪುರೇಷೆ ಕುರಿತಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 

ಸಭೆಯನ್ನುದ್ಧೇಶಿಸಿ ಮಾತನಾಡಿದ ಅನಂತಮೂರ್ತಿ ಹೆಗಡೆ, ಆಸ್ಪತ್ರೆಗೆ ಸಂಬಂಧಿಸಿ ಮುಂದಿನ ಹಂತದ ಕಾಮಗಾರಿ, ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯದೇ ಇರುವುದರಿಂದ ಸಮಾನ ಮನಸ್ಕರ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ ಎಂದರು. 

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಲಪ್ಪ ಜಕ್ಕಣ್ಣನವರ ಮಾತನಾಡಿ, ಪ್ರಸ್ತುತ ಸಾಲಿನ ಬಜೆಟ್‍ನಲ್ಲಿ ಕೊಡಗು, ಚಿತ್ರದುರ್ಗ, ಬಾಗಲಕೋಟೆ ಜಿಲ್ಲೆಗಳುಗೆ ಹೆಚ್ಚುವರಿಯಾಗಿ ಮೆಡಿಕಲ್ ಕಾಲೇಜುಗಳ ನಿರ್ಮಾಣ ಪ್ರಸ್ತಾಪವನ್ನು ಸರ್ಕಾರ ಮಾಡಿದೆ. ಆದರೆ ಈಗಾಗಲೇ ಘೋಷಣೆಯಾಗಿರುವ ಮೇಲ್ದರ್ಜೆಗೇರಿರುವ ಶಿರಸಿ ಆಸ್ಪತ್ರೆಯನ್ನು ಪೂರ್ಣಗೊಳಿಸುವ ಕೆಲಸ ನಡೆಯಬೇಕಿದೆ. ಈ ಜಾಗೃತಿ ಶಾಸಕರ ವಿರುದ್ಧದ ಹೋರಾಟವಲ್ಲ. ಬದಲಾಗಿ ಶಾಸಕರ ಕೈಯನ್ನು ಗಟ್ಟಿ ಮಾಡುವ ಕೆಲಸ ನಮ್ಮಿಂದ ನಡೆಯಬೇಕಿದೆ ಎಂದರು. 

ನಿವೃತ್ತ ಎಂಜಿನಿಯರ್ ವಿ.ಎಂ.ಭಟ್, ಡಾ. ಕೆ.ವಿ.ಶಿವರಾಮ, ಕಾಂಗ್ರೆಸ್ ಮುಖಂಡ ಪ್ರವೀಣ ಗೌಡ, ನೆಗ್ಗು ಗ್ರಾಮ ಪಂಚಾಯಿತಿ  ಸದಸ್ಯೆ ಜ್ಯೋತಿ ಹೆಗಡೆ, ಕೆ.ಬಿ. ಲೋಕೇಶ ಹೆಗಡೆ, ಮನೋಹರ ಮಲ್ಮನೆ, ಜಿ.ಎ.ಹೆಗಡೆ ಸೋಂದಾ, ಉಷಾ ಹೆಗಡೆ, ಮನೋಜ ಪಂಡಿತ, ಪ್ರಕಾಶ ಹೆಗಡೆ, ಜಯಶೀಲ ಗೌಡ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಿದರು. 

ನುಡಿದಂತೆ ನಡೆಯಬೇಕು

ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಹೋರಾಟಗಾರ ಅನಂತಮೂರ್ತಿ ಹೆಗಡೆ ಆಸ್ಪತ್ರೆಯ  ಶೇ 80ರಷ್ಟು ಕಾಮಗಾರಿ ಮುಗಿದಿದೆ. ಒಂದು ವರ್ಷದ ಹಿಂದೆಯೇ ವೈದ್ಯರ ನೇಮಕಾತಿ ಮತ್ತು ಯಂತ್ರೋಪಕರಣಗಳ ಖರೀದಿಗೆ ಪ್ರಸ್ತಾವನೆ ಕಳಿಸಿದ್ದರೂ ಸಹ ಯಾವುದೇ ಪ್ರಕ್ರಿಯೆ ಸರ್ಕಾರದಿಂದ ನಡೆದಿಲ್ಲ. ಹಿಂದೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ₹142 ಕೋಟಿ ಹಾಗೂ ಯಂತ್ರೋಪಕರಣಗಳ ಖರೀದಿಗಾಗಿ ₹30 ಕೋಟಿ ಮೀಸಲಿಟ್ಟು ಸರ್ಕಾರ ಆದೇಶ ನೀಡಿತ್ತು. ನಂತರ ಅದನ್ನು ₹5 ಕೋಟಿಗೆ ಇಳಿಸುವ ಕೆಲ ಪ್ರಯತ್ನ ನಡೆದಿತ್ತು. ಆದರೆ ಶಾಸಕರು ಸಚಿವರು ಆಸ್ಪತ್ರೆ ಕುರಿತಾಗಿ ಈ ಮೊದಲಿನ ಆದೇಶದಂತೆಯೇ ಎಲ್ಲ ಅತ್ಯಾವಶ್ಯಕ ಯಂತ್ರೋಪಕರಣಗಳ ಜತೆಗೆ ಕಾಮಗಾರಿ ನಡೆಯುವಂತೆ ಮಾಡಲಾಗುವುದು ಎಂದಿದ್ದರು. ಅದರಂತೆ ಇನ್ನು ಮುಂದೆ ಕೂಡ ಆಗಬೇಕು ಎಂದು ಆಗ್ರಹಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.