ADVERTISEMENT

ಶಿರಸಿ: ‘ಚರಂಡಿ ನೀರನ್ನು ಮರಾಠಿಕೊಪ್ಪಕ್ಕೆ ತಿರುಗಿಸಬೇಡಿ’

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 13:05 IST
Last Updated 13 ಜುಲೈ 2020, 13:05 IST
ವಿಶ್ವನಾಥ ಹೆಗಡೆ ಅವರು ನೀಡಿದ ಮನವಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಶ ಶೆಟ್ಟಿ ಅವರು ಸ್ಪೀಕರ್ ಕಚೇರಿಯಲ್ಲಿ ಸ್ವೀಕರಿಸಿದರು
ವಿಶ್ವನಾಥ ಹೆಗಡೆ ಅವರು ನೀಡಿದ ಮನವಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಶ ಶೆಟ್ಟಿ ಅವರು ಸ್ಪೀಕರ್ ಕಚೇರಿಯಲ್ಲಿ ಸ್ವೀಕರಿಸಿದರು   

ಶಿರಸಿ: ಶಿರಸಿ-ಯಲ್ಲಾಪುರ ರಸ್ತೆಯ ಕೊಳಚೆ ನೀರನ್ನು ಪುಟ್ಟನಮನೆ ಭಾಗಕ್ಕೆ ಹರಿಸುವ ಯೋಜನೆ ಸಿದ್ಧವಾಗಿರುವ ಮಾಹಿತಿ ಸಿಕ್ಕಿದ್ದು, ಈ ಯೋಜನೆಯನ್ನು ರದ್ದುಪಡಿಸಬೇಕು ಎಂದು ಪುಟ್ಟನಮನೆಯ ಕೃಷಿ ಮತ್ತು ಪರಿಸರ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.

ಸಂಘಟನೆಯ ಪದಾಧಿಕಾರಿಗಳು ಸೋಮವಾರ ಸ್ಪೀಕರ್ ಕಚೇರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಈ ಸಂಬಂಧ ಮನವಿ ಸಲ್ಲಿಸಿದರು. ಈ ಮಳೆ ನೀರು ಹರಿದು ಹೋಗಲು ಈ ಹಿಂದಿನ ವ್ಯವಸ್ಥೆ ಇರುವಲ್ಲಿಯೇ ರಾಜ ಕಾಲುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಕಾರ್ಯದರ್ಶಿ ವಿಶ್ವನಾಥ ಹೆಗಡೆ ಮಾತನಾಡಿ, ‘ಮರಾಠಿಕೊಪ್ಪ ಭಾಗಕ್ಕೆ ಹೊಂದಿಕೊಂಡಿರುವ, ಶಿರಸಿ- ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಯಲ್ಲಾಪುರ ನಾಕಾ ಕಡೆಯಿಂದ ಹರಿದು ಬರುವ ನೀರು ಅನಾದಿ ಕಾಲದಿಂದಲೂ, ಕೊಳಚೆ ನೀರು ಸಾಗುವ ಚರಂಡಿಯಲ್ಲೇ ಹೋಗುತ್ತಿತ್ತು. ಆದರೆ, ಕೆಲ ಸ್ವ ಹಿತಾಸಕ್ತಿಗಳ ಅಡೆತಡೆಯಿಂದ ಇದಕ್ಕೆ ತಡೆಯೊಡ್ಡಲಾಗಿದೆ. ಪ್ರಸ್ತುತ ಈ ನೀರನ್ನು ಮರಾಠಿಕೊಪ್ಪ ಭಾಗಕ್ಕೆ ಬಿಡಲು, ಆಡಳಿತ ಮತ್ತೊಂದು ಕಾಲುವೆ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಹೀಗೆ ಮಾಡಿದರೆ, ಪುಟ್ಟನಮನೆಯಲ್ಲಿರುವ ಶುದ್ಧ ನೀರಿನ ಝರಿಗಳು ಹಾಳಾಗುತ್ತವೆ. ಅದಕ್ಕಾಗಿ ಯೋಜನೆ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪ್ರಮುಖರಾದ ಗೋವಿಂದ ಹೆಗಡೆ, ರವಿ ಹೆಗಡೆ, ನಾರಾಯಣ ಹೆಗಡೆ, ಸುಬ್ರಾಯ ಹೆಗಡೆ, ಮನು ಹೆಗಡೆ, ಜಿ.ಎಲ್.ಹೆಗಡೆ, ನಿನಾದ ಹೆಗಡೆ, ಎಲ್.ಆರ್.ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.