ಕಾರವಾರ: ‘ಏಕಬಳಕೆಯ ಪ್ಲಾಸ್ಟಿಕ್ ಪರಿಸರದ ಜೊತೆಗೆ ಮನುಷ್ಯನ ಆರೋಗ್ಯಕ್ಕೂ ಮಾರಕ. ಅವುಗಳ ಬಳಕೆ ನಿಲ್ಲದಿದ್ದರೆ ಮುಂದಿನ ಪೀಳಿಗೆ ಸಮೃದ್ಧ ಪರಿಸರ ನೋಡಲು ಸಾಧ್ಯವಾಗದು’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ.ಸಂತೊಷ್ ಹೇಳಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಶನಿವಾರ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ‘ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸುವುದು’ ವಿಷಯದ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಮನೆ ಮನೆ ಕಸ ಸಂಗ್ರಹಿಸುವ ವೇಳೆ ಏಕಬಳಕೆಯ ಪ್ಲಾಸ್ಟಿಕ್ ಬಳಸದಂತೆ ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿ. ಪ್ಲಾಸ್ಟಿಕ್ ಎಂದರೆ ಕೇವಲ ಕ್ಯಾರಿಬ್ಯಾಗ್ ಎಂಬ ಕಲ್ಪನೆ ಜನರಲ್ಲಿದೆ. ಅವಗಳ ಹೊರತಾಗಿಯೂ ಏಕಬಳಕೆ ಪ್ಲಾಸ್ಟಿಕ್ನಿಂದ ತಯಾರಾದ ಹಲವು ಸಾಮಗ್ರಿಗಳ ಬಳಕೆ ವಿಪರೀತವಾಗಿದ್ದು, ಅವುಗಳಿಗೆ ಕಡಿವಾಣ ಹಾಕಬೇಕು’ ಎಂದರು.
ಮಂಡಳಿಯ ಉಪ ಪರಿಸರ ಅಧಿಕಾರಿ ಗಣಪತಿ ಹೆಗಡೆ ಮಾತನಾಡಿ, ‘ಪ್ಲಾಸ್ಟಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ಸಾರ್ವಜನಿಕರ ಪಾಲುದಾರಿಕೆ ಮತ್ತು ಸಹಕಾರ ಅಗತ್ಯವಿದೆ. ಪ್ಲಾಸ್ಟಿಕ್ ತ್ಯಾಜ್ಯವು ಎಲ್ಲ ರೀತಿಯ ಮಾಲಿನ್ಯಕ್ಕೂ ಕಾರಣವಾಗುತ್ತಿದೆ’ ಎಂದರು.
ಪೌರಾಯುಕ್ತ ಜಗದೀಶ ಹುಲಗೆಜ್ಜಿ, ‘ನಗರಸಭೆಯ ವತಿಯಿಂದ ನಿಯಮಿತವಾಗಿ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ’ ಎಂದರು.
ನಗರಸಭೆಯ ಕಂದಾಯ ಅಧಿಕಾರಿ ರವಿ ನಾಯ್ಕ, ಲೆಕ್ಕಾಧಿಕಾರಿ ಮಂಜುನಾಥ ಬಿಸ್ಗಣ್ಣವರ, ಕಿರಿಯ ಆರೋಗ್ಯ ನಿರೀಕ್ಷಕಿ ದೀಪಾ ಶೆಟ್ಟಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಶಂಕರ ಚೆಲುವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.